ಜನಿವಾರ ವಿವಾದ: ಗೊಂದಲ ನಿವಾರಣೆಗೆ ಕೇಂದ್ರವೇ ಉತ್ತರ ಕೊಡ್ಬೇಕು: ರಾಮಲಿಂಗಾರೆಡ್ಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಇಟಿ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಯ ಜನಿವಾರ ತೆಗೆಸಿರುವ ಪ್ರಕರಣ ತೀವ್ರ ಆಘಾತಕಾರಿ. ಇದನ್ನು ಖಂಡಿಸುತ್ತೇನೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಈ ಕುರಿತು ರಾಜ್ಯ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಅವರಿಗೆ ಈ ಬಗ್ಗೆ ಪತ್ರ ಬರೆದಿರುವ ಅವರು, ಪ್ರವೇಶ ಪರಿಕ್ಷೆಗಳ ಸಂದರ್ಭದಲ್ಲಿ ಧಾರ್ಮಿಕ ಉಡುಗೆಗಳನ್ನೂ ತೆಗೆದು ತಪಾಸಣೆ ನಡೆಸಬೇಕು ಎಂದು ಎನ್‌ಟಿಎ ಯ (ಕೇಂದ್ರ ಸರ್ಕಾರದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ) ಮಾರ್ಗಸೂಚಿ ಹೇಳುತ್ತದೆ. ರಾಜ್ಯದ ಸಂಸ್ಥೆಗಳೂ ಇದೇ ಮಾರ್ಗಸೂಚಿಯನ್ನು ಪಾಲಿಸುತ್ತವೆ. ಈ ಸಂಬಂಧ ಕೇಂದ್ರ ಸರ್ಕಾರವೇ ಗೊಂದಲ ನಿವಾರಿಸಬೇಕು ಎಂದು ಹೇಳಿದ್ದಾರೆ.

ಎನ್‌ಟಿಎ ಮೂಲಕ ನಡೆಯುವ ನೀಟ್‌ ಪರೀಕ್ಷೆ ವೇಳೆ ಉದ್ದ ಅಂಗಿ, ಕೋಟ್‌, ಕೈದಾರ, ಜನಿವಾರ, ಬೂಟ್‌, ಓಲೆ, ಗೆಜ್ಜೆ, ಸರ, ಉಂಗುರ ಧರಿಸಿರುವುದು ನಿಷಿದ್ಧ. ತಪಾಸಣೆಯ ನಂತರವಷ್ಟೇ ಧಾರ್ಮಿಕ ಉಡುಗೆಗಳನ್ನು ತೊಡಲು ಅವಕಾಶವಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ ಎಂದು ಮಾಹಿತಿ ನೀಡಿದರು.

ಆದರೆ ಈ ವಿಚಾರದಲ್ಲಿ ಬಿಜೆಪಿ ನಾಯಕರು ಮತ್ತು ಶಾಸಕರು, ರಾಜ್ಯ ಸರ್ಕಾರವನ್ನು ಹಿಂದು ವಿರೋಧಿ ಎಂದು ಬಿಂಬಿಸಲು ಹೊರಟಿರುವುದು ಕಳವಳಕಾರಿ. ಕೇಂದ್ರ ಸರ್ಕಾರ ರೂಪಿಸಿದ ನಿಯಮವನ್ನು ಪರೀಕ್ಷಾ ಕೇಂದ್ರದ ತಪಾಸಕರು ಪಾಲಿಸಿದ್ದಾರೆ. ಹೀಗಿರುವಾಗ ಕೇಂದ್ರದ ನಿಯಮ, ರಾಜ್ಯ ಸರ್ಕಾರ ಮತ್ತು ಪರೀಕ್ಷಾ ಕೇಂದ್ರದ ತಪಾಸಕರಿಗೆ ಯಾವ ರೀತಿಯ ಸಂಬಂಧ ಎಂದು ರಾಮಲಿಂಗಾರೆಡ್ಡಿ ಪ್ರಶ್ನಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!