ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಸಭೆಯಲ್ಲಿ ಇಂದು ವಿರೋಧ ಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದ ಮಧ್ಯೆಯೇ, ಕಡಲ ತೀರದಲ್ಲಿನ ಖನಿಜಗಳ ಅನ್ವೇಷಣೆ, ಗಣಿಗಾರಿಕೆಗೆ 50 ವರ್ಷಗಳ ಕಾಲ ಗುತ್ತಿಗೆ ನೀಡುವುದಕ್ಕೆ ಅವಕಾಶ ಕಲ್ಪಿಸುವ ಮಸೂದೆಯನ್ನು ಅಂಗೀಕರಿಸಲಾಯಿತು.
ಭೋಜನ ವಿರಾಮದ ನಂತರ ಕಲಾಪ ಆರಂಭಗೊಂಡಾಗ ಮಣಿಪುರದಲ್ಲಿನ ಪರಿಸ್ಥಿತಿಯನ್ನು ಮತ್ತೆ ಪ್ರಸ್ತಾಪಿಸಿದ ವಿರೋಧ ಪಕ್ಷಗಳ ಸದಸ್ಯರು, ಕಣಿವೆ ರಾಜ್ಯದ ಪರಿಸ್ಥಿತಿ ಕುರಿತು ಚರ್ಚೆ ನಡೆಸಬೇಕು ಎಂದು ಪಟ್ಟು ಹಿಡಿದರು.
ಈ ಗದ್ದಲ ನಡುವೆಯೇ, ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ ಜೋಶಿ ಅವರು ‘ಕಡಲತೀರದ ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ, 2023’ ಮಂಡಿಸಿದರು.
ಕಡಲ ಕಿನಾರೆಯಲ್ಲಿ ಲಭ್ಯವಿರುವ ಖನಿಜಗಳ ಅನ್ವೇಷಣೆ, ಅವುಗಳ ಅಭಿವೃದ್ಧಿ ಹಾಗೂ ಹರಾಜಿಗೆ ಈ ಮಸೂದೆ ಅವಕಾಶ ಒದಗಿಸುತ್ತದೆ. ಈ ಗುತ್ತಿಗೆಯನ್ನು ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆ ಮೂಲಕ ಖಾಸಗಿ ವಲಯಕ್ಕೂ ನೀಡುವ ಅವಕಾಶವನ್ನು ಒದಗಿಸುತ್ತದೆ.ಗುತ್ತಿಗೆ ಪಡೆದ ನಂತರ, ಖನಿಜಗಳ ಉತ್ಪಾದನೆ ಮತ್ತು ಸಾಗಣೆಗೆ ನಾಲ್ಕು ವರ್ಷಗಳ ಸಮಯಾವಕಾಶ ಒದಗಿಸಲಾಗುತ್ತದೆ. ಉತ್ಪಾದನೆ ಮತ್ತು ಸಾಗಣೆ ಕಾರ್ಯ ಸ್ಥಗಿತಗೊಂಡಿದ್ದ ಸಂದರ್ಭದಲ್ಲಿ ಅದನ್ನು ಪುನಃ ಆರಂಭಿಸುವ ಸಲುವಾಗಿ ಮತ್ತೆ ಎರಡು ವರ್ಷಗಳ ಅವಕಾಶ ನೀಡುವ ಉದ್ದೇಶವನ್ನೂ ಈ ಮಸೂದೆ ಒಳಗೊಂಡಿದೆ.
ಅಣುಶಕ್ತಿ ಕ್ಷೇತ್ರದಲ್ಲಿ ಬಳಸುವ ಖನಿಜಗಳ ಅನ್ವೇಷಣೆ ಅಥವಾ ಉತ್ಪಾದನೆಯ ಪರವಾನಗಿಯನ್ನು ಸರ್ಕಾರಿ ಇಲ್ಲವೇ ಸರ್ಕಾರದ ಅಧೀನದ ನಿಗಮಕ್ಕೆ ಮಾತ್ರ ನೀಡುವ ಅಂಶವೂ ಮಸೂದೆಯಲ್ಲಿದೆ.
ಈ ಮಸೂದೆಯನ್ನು ಲೋಕಸಭೆಯಲ್ಲಿ ಮಂಗಳವಾರ ಅಂಗೀಕರಿಸಲಾಗಿತ್ತು.