ಹೊಸದಿಗಂತ ಬೆಳಗಾವಿ:
ಬಿಸಿಲಿನ ತಾಪ ತಾಳಲಾರದೆ ನೀರು ಹುಡುಕಿಕೊಂಡು ಗ್ರಾಮದತ್ತ ಮುಖ ಮಾಡಿದ ನರಿಯೊಂದು ಅಪರಿಚಿತ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗೋಕಾಕ ತಾಲ್ಲೂಕಿನ ಕಟಮಳ್ಳಿ ತಾಂಡಾ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದೆ.
ಮಾರ್ಚ್ ಆರಂಭದಲ್ಲೇ ಬಿಸಿಲಿನ ಝಳ ಹೆಚ್ಚಾಗುತ್ತಿದ್ದು, ಅರಣ್ಯ ಪ್ರದೇಶದಲ್ಲಿ ನೀರಿನ ಮೂಲಗಳು ಬತ್ತುತ್ತಿವೆ. ಹೀಗಾಗಿ ವನ್ಯಜೀವಿಗಳು ಬಾಯಾರಿಕೆ ನೀಗಿಸಿಕೊಳ್ಳಲು ಗ್ರಾಮಗಳತ್ತ ಧಾವಿಸುತ್ತಿವೆ. ಆದರೆ, ಅರಣ್ಯದ ಮೂಲಕ ಹಾದುಹೋಗುವ ಹೆದ್ದಾರಿಗಳಲ್ಲಿ ವೇಗ ನಿಯಂತ್ರಕಗಳಿಲ್ಲದ ಕಾರಣ ಮತ್ತು ವಾಹನ ಸವಾರರ ಅಜಾಗರೂಕತೆಯಿಂದ ಇಂತಹ ಅಪಘಾತಗಳು ಸಂಭವಿಸುತ್ತಿವೆ.
ಈ ವರ್ಷವೊಂದರಲ್ಲೇ ಇದೇ ಭಾಗದಲ್ಲಿ ಎರಡು ಹೈನಾ (ಕತ್ತೆಕಿರುಬ) ಮತ್ತು ಒಂದು ನರಿ ವಾಹನ ಡಿಕ್ಕಿಗೆ ಬಲಿಯಾಗಿರುವುದು ಪರಿಸರ ಪ್ರೇಮಿಗಳ ಆತಂಕಕ್ಕೆ ಕಾರಣವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಲಯ ಅರಣ್ಯಾಧಿಕಾರಿ (RFO) ಸಂಜೀವ ಸಂಸುದ್ಧಿ ಅವರು, “ವನ್ಯಜೀವಿಗಳ ಸಾವು ತಡೆಗಟ್ಟಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬೇಸಿಗೆಯ ದಿನಗಳಲ್ಲಿ ಪ್ರಾಣಿ-ಪಕ್ಷಿಗಳಿಗೆ ಅರಣ್ಯದ ಒಳಭಾಗದಲ್ಲೇ ನೀರಿನ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುವುದು,” ಎಂದು ತಿಳಿಸಿದ್ದಾರೆ.



