ಹೊಸದಿಗಂತ ಡಿಜಿಟಲ್ ಡೆಸ್ಕ್:
10 ನಿಮಿಷ ಹಾರ್ಟ್ಬೀಟ್ ನಿಂತಿತ್ತು.. ನಾನು ಸತ್ತೇ ಹೋಗಿದ್ದೆ. ಮತ್ತೆ ಬದುಕಿದ್ದೇ ಪವಾಡ… ಈ ಮಾತು ಹೇಳಿದ್ದು ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ.
ಹೌದು, ಶ್ರೇಯಸ್ ತಲ್ಪಾಡೆ ಅವರು ಶೂಟಿಂಗ್ ಮುಗಿಸಿ ಸಂಜೆ ಮನೆಗೆ ವಾಪಸಾದ ಮೇಲೆ ಯಾರೋ ಆರೋಗ್ಯ ಹದಗೆಟ್ಟಂತೆ ಆಯಿತು. ಪತ್ನಿ ದೀಪ್ತಿ ಅವರಿಗೆ ವಿಷಯ ತಿಳಿಸಿದಾಗ, ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಯಾರು ನಡೆಸಲಾಗಿತ್ತು. ಇದೇ ಸಂದರ್ಭದಲ್ಲಿ ಶ್ರೇಯಸ್ ಕುಸಿದು ಬಿದ್ದರು. ಭಯಗೊಂಡ ಪತ್ನಿ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆಗ ಅವರಿಗೆ ಹಾರ್ಟ್ ಅಟ್ಯಾಕ್ ಆಗಿದ್ದು ತಿಳಿಯಿತು.
ಅದಾಗಲೇ 10 ನಿಮಿಷ ಅವರ ಹೃದಯ ಬಡಿತ ನಿಂತಿತ್ತು. ವೈದ್ಯರು ಕೂಡ ಇದು ಮುಗಿದ ಕೇಸೇ ಎಂದು ಭಾವಿಸಿದ್ದರು. ಆದರೆ ಆರೋಗ್ಯದಲ್ಲಿ ಸ್ವಲ್ಪ ಸುಧಾರಿಸಿಕೊಳ್ಳುತ್ತಾರೆ ಎಂದಾಗ ಶ್ರೇಯಸ್ಗೆ ಆಂಜಿಯೋಪ್ಲಾಸ್ಟಿ ಮಾಡಲಾಗಿತ್ತು. ನಂತರ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಇದೀಗ ಸಂಪೂರ್ಣ ಹುಷಾರಾಗಿ ಮನೆಗೆ ಮರಳಿದ್ದಾರೆ.
ಈ ಕುರಿತು ಮಾತನಾಡಿದ ಅವರು,10 ನಿಮಿಷ ಹಾರ್ಟ್ಬೀಟ್ ನಿಂತಿತ್ತು.. ನಾನು ಸತ್ತೇ ಹೋಗಿದ್ದೆ. ಮತ್ತೆ ಬದುಕಿದ್ದೇ ಪವಾಡ… ಅಷ್ಟಕ್ಕೂ ಜೀವನದಲ್ಲಿ ಒಮ್ಮೆಯೂ ನಾನು ಆಸ್ಪತ್ರೆಗೆ ಹೋದವನಲ್ಲ. ಹೋಗಿದ್ದು ಇದೇ ಮೊದಲು. ಹಾರ್ಟ್ಬೀಟ್ ನಿಂತಿದ್ದು ಎಂದರೆ ಶವವಾಗಿಯೇ ಹೋಗಿದ್ದೆ. ಆದರೆ ಅದೇನು ಪವಾಡವೇ ಗೊತ್ತಿಲ್ಲ. ಮತ್ತೊಮ್ಮೆ ಬದುಕಿದ್ದೇನೆ. ಬದುಕಿ ಬಂದಾಗಲೇ ನನಗೆ ವೈದ್ಯರಿಂದ ತಿಳಿದದ್ದು ನನ್ನ ಹಾರ್ಟ್ಬೀಟ್ 10 ನಿಮಿಷ ನಿಂತು ಹೋಗಿತ್ತು ಎನ್ನುವುದು. ಆದರೆ ನಾನು ಸಾಯುತ್ತೇನೆ ಅಂದುಕೊಂಡಿದ್ದೆ. ಅರ್ಧದಲ್ಲಿಯೇ ಬಿಟ್ಟು ಹೋಗುತ್ತಿರುವುದಕ್ಕೆ ಆಗ ಪತ್ನಿಯಲ್ಲೂ ಕ್ಷಮೆ ಕೋರಿದ್ದೆ. ಬದುಕಿ ಬರುತ್ತೇನೆ ಎಂದು ಎನ್ನಿಸಿರಲಿಲ್ಲ. ನಿಮ್ಮೆಲ್ಲರ ಆಶೀರ್ವಾದದಿಂದ ಬದುಕಿ ಬಂದಿದ್ದೇನೆ ಎಂದರು.
ಸದ್ಯ ಮನೆಯಲ್ಲಿ ಶ್ರೇಯಸ್ ವಿಶ್ರಾಂತಿ ಪಡೆಯುತ್ತಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ತೀವ್ರವಾದ ಕೆಲಸದ ವೇಳಾಪಟ್ಟಿಯಿಂದಾಗಿ ಬಳಲಿರುವ ಕಾರಣ ಹೀಗೆ ಆಗಿರುವುದಾಗಿ ವೈದ್ಯರು ಹೇಳಿದ್ದು, ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿರುವುದಾಗಿ ಶ್ರೇಯಸ್ ಹೇಳಿದ್ದಾರೆ.