ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೈಕೋರ್ಟ್ ಆನೇಕಲ್ ಕರಗ ವಿವಾದಕ್ಕೆ ತೆರೆ ಎಳೆದಿದೆ. ಗೊಂದಲದ ಗೂಡಾಗಿದ್ದ ಇತಿಹಾಸ ಪ್ರಸಿದ್ಧ ಆನೇಕಲ್ ಕರಗ ವಿವಾದಕ್ಕೆ ಕರ್ನಾಟಕ ಹೈಕೋರ್ಟ್ ಬಗೆಹರಿಸಿದ್ದು, ಅರ್ಚಕರ ಪರವಾಗಿ ಹೈಕೋರ್ಟ್ ಆದೇಶ ನೀಡಿದೆ.
ಇದರಿಂದ ಕರಗಕ್ಕೆ ಸಕಲ ಸಿದ್ಧತೆಗಳು ಆರಂಭವಾಗಿದ್ದು, ಇದೇ ಏಪ್ರಿಲ್ 12ರಂದು ಹಸಿ ಕರಗ ನಡೆದರೆ, ಏ.15ರಂದು ಒಣ ಕರಗ ಜರುಗಲಿದೆ.
ಬೆಂಗಳೂರು ಸೇರಿದಂತೆ ರಾಜ್ಯದ 175 ಕಡೆ ನಡೆಯುವ ಕರಗಗಳಲ್ಲಿ ಬೆಂಗಳೂರು ಮತ್ತು ಆನೇಕಲ್ ಕರಗ ಮಹೋತ್ಸವ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿವೆ. ರಾಜ್ಯದಲ್ಲಿ ಆನೇಕಲ್ ನಲ್ಲಿ ಮಾತ್ರ ಹಸಿ ಕರಗ ಮತ್ತು ಒಣ ಕರಗ ಹಾಗೂ ಕೋಟೆಜಗಳ ಎಂಬ ವಿಶಿಷ್ಟ ಆಚರಣೆ ನಡೆಯುತ್ತದೆ. ಚೈತ್ರಾ ಹುಣ್ಣಿಮೆಯಂದು ಬೆಂಗಳೂರು ಕರಗ ನಡೆಯುವ ದಿನವೇ ಆನೇಕಲ್ ನಲ್ಲಿ ಹಸಿ ಕರಗ ಜರುಗಲಿದೆ. ಅಂದ್ರೆ ಏಪ್ರಿಲ್ 12ರಂದು ಹಸಿ ಕರಗ ಜರುಗಲಿದೆ. ಇನ್ನು ಏ.15ರಂದು ಒಣ ಕರಗ ನಡೆಯಲಿದೆ.
ಈ ವರ್ಷ ಕರಗ ಹೊರಲು ಕುಲಸ್ಥರಿಗೆ ಆನೇಕಲ್ ತಹಶಿಲ್ದಾರ್ ಶಶಿಧರ್ ಮಾಡ್ಯಾಳ್ ಆದೇಶ ನೀಡಿದ್ದು, ಚಂದ್ರಪ್ಪ ಕರಗ ಹೊರಲು ಎಲ್ಲಾ ಸಿದ್ದತೆ ನಡೆದಿತ್ತು. ಆದ್ರೆ ನಿನ್ನೆ (ಏಪ್ರಿಲ್ 09) ಹೈಕೋರ್ಟ್ ಅರ್ಚಕರ ಪರವಾಗಿ ಅಂತಿಮ ಆದೇಶ ನೀಡಿದೆ. ಈ ಹಿನ್ನೆಲೆ ಇಂದು ಕೊನೆ ಕ್ಷಣದ ಸಿದ್ದತೆ ನಡೆದಿದೆ. ಈ ಬಾರಿ ಹಿಂದಿನಂತೆ ಕರಗ ಆನೇಕಲ್ ಪಟ್ಟಣದ ಎಲ್ಲಾ ಕಡೆ ಸಂಚಾರ ಮಾಡುವುದಿಲ್ಲ. ರಾಜಬೀದಿಗಳಲ್ಲಿ ಮಾತ್ರ ಕರಗ ಸಾಗಲಿದ್ದು, ಭಕ್ತರು ಸಹಕರಿಸಬೇಕಾಗಿ ಎಂದು ಮೂಲ ವಹ್ನಿಕುಲ ಸೇವಾ ಸಂಘದ ಅಧ್ಯಕ್ಷರು ಮನವಿ ಮಾಡಿದ್ದಾರೆ.
ಆನೇಕಲ್ ದ್ರೌಪದಮ್ಮ ಮತ್ತು ಧರ್ಮರಾಯಸ್ವಾಮಿ ಕರಗ ವಿಚಾರ ಮೂಲ ವಹ್ನಿಕುಲ ಸೇವಾ ಸಂಘ ಮತ್ತು ಅರ್ಚಕರು ಹಾಗೂ ಕುಲಸ್ಥರ ನಡವೆ ದಶಕಗಳಿಂದ ವಿವಾದ ನಡೆಯುತ್ತಿದೆ. ಅನಾದಿ ಕಾಲದಿಂದಲೂ ದೇವಾಲಯ ಅರ್ಚಕರ ಕುಟುಂಬ ಕರಗ ನಡೆಸಿಕೊಂಡು ಬರಲಾಗುತ್ತಿತ್ತು. ಆದ್ರಲ್ಲು ಅರ್ಚಕ ಅರ್ಜುನಪ್ಪ ಕರಗ ನಡೆಸುತ್ತಿದ್ದಾಗ ಹೆಚ್ಚು ವೈಭವಯುತವಾಗಿ ನಡೆಯುತ್ತಿತ್ತು. ಆದ್ರೆ ಅರ್ಜುನಪ್ಪ ಬಳಿಕ ಕುಲಸ್ಥರು ತಾವು ಕೂಡ ಕರಗ ಹೊರುವುದಾಗಿ ತಕರಾರು ತೆಗೆದ ಬಳಿಕ ವಿವಾದ ಹುಟ್ಟಿಕೊಂಡಿತ್ತು. ಅಂದಿನಿಂದ ಪ್ರತಿವರ್ಷ ಆನೇಕಲ್ ಕರಗ ಮಹೋತ್ಸ ಗೊಂದಲದ ಗೂಡಾಗಿತ್ತು.