ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ ಪಾಲಿಗೆ ಅಮೃತದಂತಿದ್ದ ಹಿಪ್ಪರಗಿ ಜಲಾಶಯ ಈಗ ಬರಿದಾಗುತ್ತಿದೆ. ದಿನೇ ದಿನೆ ನೀರಿನ ಮಟ್ಟ ಕುಸಿಯುತ್ತಿರುವುದು ನೋಡಿದರೆ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಬರುವ ಲಕ್ಷಣಗಳು ಎದ್ದು ಕಾಣುತ್ತಿವೆ.
6 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಈಗ ಇರುವುದು ಕೇವಲ 2.37 ಟಿಎಂಸಿ ಮಾತ್ರ. ಪ್ರತಿದಿನ ಸುಮಾರು 0.07 ಟಿಎಂಸಿಯಷ್ಟು ನೀರು ಕಡಿಮೆಯಾಗುತ್ತಿದೆ. ಒಂದು ಕಡೆ ಜನಬಳಕೆ ಹೆಚ್ಚಾದರೆ, ಇನ್ನೊಂದೆಡೆ ಸೂರ್ಯನ ಪ್ರಖರ ತಾಪಕ್ಕೆ ನೀರು ಆವಿಯಾಗುತ್ತಿದೆ.
ರಬಕವಿ-ಬನಹಟ್ಟಿ ಹತ್ತಿರದ ಕೃಷ್ಣಾ ನದಿಯಲ್ಲಿ ಮುಳುಗಿದ್ದ ಮಹಿಷವಾಡಗಿ ಬ್ಯಾರೇಜ್ ಈಗ ನೀರಿನಿಂದ ಹೊರಬರುತ್ತಿದೆ. ಇನ್ನೆರಡು ದಿನಗಳಲ್ಲಿ ಇದು ಸಂಚಾರಕ್ಕೆ ಮುಕ್ತವಾಗಬಹುದು, ಅಂದರೆ ಅಲ್ಲಿ ನೀರು ಅಷ್ಟರಮಟ್ಟಿಗೆ ಖಾಲಿಯಾಗಿದೆ ಎಂದರ್ಥ.
ಒಟ್ಟಿನಲ್ಲಿ, ನೀರಿನ ಮಟ್ಟ ಹೀಗೆ ದಿಢೀರ್ ಕುಸಿತ ಕಾಣುತ್ತಿರುವುದು ಗಡಿ ಭಾಗದ ಜನರಲ್ಲಿ ಬೇಸಿಗೆಯ ಬವಣೆಯ ಆತಂಕವನ್ನು ಹೆಚ್ಚಿಸಿದೆ. ಹನಿ ಹನಿ ನೀರನ್ನೂ ಮಿತವಾಗಿ ಬಳಸುವುದು ಈಗ ಅನಿವಾರ್ಯವಾಗಿದೆ.



