ಹೊಸದಿಗಂತ ವರದಿ,ದಾವಣಗೆರೆ:
ಶೀಲ ಶಂಕಿಸಿ ಹೆಂಡತಿಯನ್ನು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು 6 ತಿಂಗಳ ನಂತರ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕು ಇದ್ದಲ ನಾಗೇನಹಳ್ಳಿ ಗ್ರಾಮದ ಕುರಿಗಾಹಿ ಕದರಪ್ಪ(60 ವರ್ಷ) ಬಂಧಿತ ಕೊಲೆ ಆರೋಪಿ.
ಈತನ ಕುರಿ ಮಂದೆ ಚನ್ನಗಿರಿ ತಾಲ್ಲೂಕು ಗುಡ್ಡದಕೋಮಾರನಹಳ್ಳಿ ಗ್ರಾಮದ ಅಡಿಕೆ ತೋಟದಲ್ಲಿ ವಾಸ್ತವ್ಯ ಹೂಡಿದ್ದ ಸಂದರ್ಭದಲ್ಲಿ ಕಳೆದ ಜನವರಿ 25ರಂದು ರಾತ್ರಿ ತನ್ನ ಪತ್ನಿ ಸಾಕಮ್ಮ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು. ಅದಾದ ನಂತರ ಆರೋಪಿ ಕದರಪ್ಪ ಶಿವಮೊಗ್ಗ, ಹಾಸನ, ಚಿಕ್ಕಮಂಗಳೂರು, ಬೆಂಗಳೂರು ಹಾಗೂ ಇತರೆಡೆ ತಲೆಮರೆಸಿಕೊಂಡಿದ್ದ. ಸುಮಾರು 6 ತಿಂಗಳ ನಂತರ ಪೊಲೀಸರು ಆರೋಪಿಯನ್ನು ಕೊನೆಗೂ ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಆರೋಪಿ ಪತ್ತೆಗೆ ಎಎಸ್ಪಿ ವಿಜಯಕುಮಾರ ಎಂ.ಸಂತೋಷ, ಚನ್ನಗಿರಿ ಡಿವೈಎಸ್ಪಿ ರುದ್ರಪ್ಪ ಎಸ್.ಉಜ್ಜನಕೊಪ್ಪ, ಮಾರ್ಗದರ್ಶನದಲ್ಲಿ ಸಂತೆಬೆನ್ನೂರು ಸಿಪಿಐ ಲಿಂಗನಗೌಡ ನೆಗಳೂರು ನೇತೃತ್ವದಲ್ಲಿ ಪಿಎಸೈ ಹೆಚ್.ಕೆ.ವೀಣಾ ಹಾಗೂ ಸಿಬ್ಬಂದಿಯನ್ನು ಒಳಗೊಂಡ ತಂಡ ಕಾರ್ಯಾಚರಣೆ ಕೈಗೊಂಡಿತ್ತು. ತಂಡದ ಕಾರ್ಯಕ್ಕೆ ಎಸ್ಪಿ ಉಮಾ ಪ್ರಶಾಂತ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.