ಕಾಸರಗೋಡು ದಂಪತಿ ಮಾರಿದ ಲಾಟರಿ ಟಿಕೆಟ್ ಗೆ ಬಂತು 13 ಕೋಟಿ ಬಹುಮಾನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೇರಳ ಸರಕಾರದ ಲಾಟರಿ ಮಾರಾಟಗಾರರಾದ ಮಂಜೇಶ್ವರದ ದಂಪತಿಗೆ ಬುಧವಾರ ಸಂಭ್ರಮದ ಮೇಲೆ ಸಂಭ್ರಮ !ಮಂಜೇಶ್ವರ ಬಳಿಯ ಹೊಸಂಗಡಿ ಮೂಲದ ಮೇರಿ ಕುಟ್ಟಿ ಜೋಜೊ(56)ಅವರು ಮಾರಿದ ಪೂಜಾ ಬಂಪರ್ ಟಿಕೆಟಿಗೆ 12ಕೋ.ರೂ.ಬಹುಮಾನ ಘೋಷಣೆಯಾಗಿದೆ.ಹಾಗೆಯೇ ದ್ವಿತೀಯ ಬಹುಮಾನ 1 ಕೋ.ರೂ.ಗಳು ಅವರ ಪತಿ ಜೋಜೊ ಜೋಸೆಫ್ (57)ಅವರು ಮಾರಿದ ಟಿಕೆಟಿಗೆ ಲಭಿಸಿದೆ.

ತಾವು ಭಾರತ್ ಲಾಟರಿ ಏಜೆನ್ಸಿ ಹೆಸರಿನಡಿ ಎರಡು ಪ್ರತ್ಯೇಕ ಲಾಟರಿ ಟಿಕೆಟ್ ಏಜೆನ್ಸಿಗಳನ್ನು ಹೊಂದಿದ್ದು, ಈ ದಂಪತಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಿಂದ 25000 ಪೂಜಾ ಬಂಪರ್ ಟಿಕೆಟ್‌ಗಳನ್ನು ಮಾರಾಟಕ್ಕೆಂದು ಖರೀದಿಸಿ ತಂದಿತ್ತು. ಅವರು ಮಂಜೇಶ್ವರ ಸಮೀಪದ ಮಜೀರ್‌ಪಳ್ಳದಲ್ಲಿ ಸಣ್ಣ ಲಾಟರಿ ಅಂಗಡಿಯೊಂದನ್ನು ಹೊಂದಿದ್ದಾರೆ.ನನ್ನ ಬಹುತೇಕ ಲಾಟರಿ ಟಿಕೆಟ್‌ಗಳು ಕಣ್ಣೂರು ಜಿಲ್ಲೆಯಲ್ಲಿ ಮಾರಾಟವಾಗಿವೆ ಎಂದು ಜೋಸೆಫ್ ಹೇಳುತ್ತಾರೆ.ಅವರು ತನ್ನ ಟಾಟಾ ನ್ಯಾನೋ ಕಾರಿನಲ್ಲಿ ಲಾಟರಿ ಟಿಕೆಟ್‌ಗಳನ್ನು ಒಯ್ದು ಮಾರುತ್ತಾರೆ.ಕೆಲವು ಟಿಕೆಟ್‌ಗಳನ್ನು ಎರ್ನಾಕುಳಂನಲ್ಲಿರುವ ನಮ್ಮ ಸ್ನೇಹಿತರಾದ ಸಬ್ ಏಜೆಂಟ್‌ಗಳ ಮೂಲಕವೂ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

ನಾವು ಟಿಕೆಟ್‌ಗಳನ್ನು ವಿನಿಮಯ ಮಾಡುತ್ತೇವೆ. ಕೆಲವು ಗ್ರಾಹಕರು ನಿರ್ದಿಷ್ಟ ಜಿಲ್ಲೆಯೊಂದರಿಂದ ಟಿಕೆಟ್ ಖರೀದಿಸಲು ಬಯಸುತ್ತಾರೆ. ಆದ್ದರಿಂದ ನಮಗೆ ಖರೀದಿದಾರರು ಯಾರು ಎಂಬುದು ಗೊತ್ತಾಗುತ್ತಿಲ್ಲ. ಆದರೆ ವಿಜೇತರು ಕಣ್ಣೂರು ಜಿಲ್ಲೆಯವರಾಗಿರುವ ಸಾಧ್ಯತೆ ಹೆಚ್ಚು ಎಂದು ಹೇಳುತ್ತಾರೆ.

ಈ ಹಿಂದೆಯೂ ಅವರು ಮಾರಿದ ಟಿಕೆಟ್‌ಗಳಿಗೆ 2 ಲಕ್ಷ, 3 ಲಕ್ಷ, 5000 ರೂ.ಬಹುಮಾನಗಳು ಬಂದಿದ್ದವು.ಈ ಬಾರಿ ಬಂಪರ್ ಬಹುಮಾನವೇ ಬಂದಿದೆ ಎಂದು ಖುಷಿಪಟ್ಟಿದ್ದಾರೆ.

ಲಾಟರಿ ವಿಜೇತರು ಇನ್ನೂ ತಮ್ಮ ಗುರುತನ್ನು ಬಹಿರಂಗಪಡಿಸಿಲ್ಲ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!