ಹೊಸದಿಗಂತ ಡಿಜಿಟಲ್ ಡೆಸ್ಕ್:
ರಣಜಿ ಟ್ರೋಫಿ ಫೈನಲ್ ಪಂದ್ಯವು ಕೇವಲ ಬ್ಯಾಟ್ ಮತ್ತು ಬಾಲ್ ನಡುವಿನ ಹೋರಾಟವಾಗಿ ಉಳಿದಿಲ್ಲ. ಇದು ಈಗ ಆಟಗಾರರ ನಡುವಿನ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಕರ್ನಾಟಕ ಮತ್ತು ಜಮ್ಮು-ಕಾಶ್ಮೀರ ತಂಡಗಳ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಸ್ಲೆಡ್ಜಿಂಗ್ ಮಿತಿ ಮೀರುತ್ತಿದೆ.
ನಾಲ್ಕನೇ ದಿನದಾಟದ 49ನೇ ಓವರ್ನಲ್ಲಿ ಕರ್ನಾಟಕದ ವೇಗಿ ವೈಶಾಕ್ ವಿಜಯಕುಮಾರ್ ಎಸೆದ ತೀಕ್ಷ್ಣ ಬೌನ್ಸರ್ ಅನ್ನು ಎದುರಿಸಲು ಆರಂಭಿಕ ಆಟಗಾರ ಖಮ್ರಾನ್ ಇಕ್ಬಾಲ್ ಪರದಾಡಿದರು. ಈ ವೇಳೆ ವೈಶಾಕ್ ಬ್ಯಾಟರ್ ಬಳಿ ತೆರಳಿ ಕೆಣಕಲು ಆರಂಭಿಸಿದರು. ಇದಕ್ಕೆ ಪ್ರತಿಯಾಗಿ ಇಕ್ಬಾಲ್, “ಸುಮ್ಮನೆ ಹೋಗಿ ಬೌಲಿಂಗ್ ಮಾಡು” ಎಂದು ಟಾಂಗ್ ನೀಡಿದರು.
ಆದರೆ ಜಗಳ ಅಲ್ಲಿಗೆ ನಿಲ್ಲಲಿಲ್ಲ. ವೈಶಾಕ್ ಅವರ ವೇಗವನ್ನು ಲೇವಡಿ ಮಾಡಿದ ಇಕ್ಬಾಲ್, “ನೀನು ಬೌಲಿಂಗ್ ಮಾಡ್ತಿರೋದು ನೋಡಿದ್ರೆ ಒಬ್ಬ ಸ್ಪಿನ್ನರ್ ಬೌಲಿಂಗ್ ಮಾಡಿದ ಹಾಗಿದೆ, ಅಷ್ಟೊಂದು ನಿಧಾನವಾಗಿದೆ!” ಎಂದು ವ್ಯಂಗ್ಯವಾಡಿದರು.
ಈ ಮಾತಿನಿಂದ ಕೆರಳಿದ ವೈಶಾಕ್ ಮತ್ತಷ್ಟು ವೇಗವಾಗಿ ಚೆಂಡೆಸೆದರೂ, ಲಯದಲ್ಲಿದ್ದ ಇಕ್ಬಾಲ್ ಆ ಎಸೆತವನ್ನು ಭರ್ಜರಿಯಾಗಿ ಸಿಕ್ಸರ್ಗೆ ಅಟ್ಟುವ ಮೂಲಕ ಮೈದಾನದಲ್ಲೇ ಪ್ರತ್ಯುತ್ತರ ನೀಡಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಅಂಪೈರ್ ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಬೇಕಾಯಿತು.



