ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈದಾನದಲ್ಲಿ ಸಿಕ್ಸರ್-ಫೋರ್ ಬಾರಿಸಿ ಎದುರಾಳಿಗಳನ್ನು ಧೂಳಿಪಟ ಮಾಡುವುದು ನಮ್ಮ ಲೇಡಿ ಗ್ಯಾಂಗ್ಗೆ ಹೊಸದೇನೂ ಅಲ್ಲ. ಶ್ರೀಲಂಕಾ ವಿರುದ್ಧ ಬರೋಬ್ಬರಿ 72 ರನ್ಗಳ ಭರ್ಜರಿ ಗೆಲುವು ಸಾಧಿಸಿ, ಭಾರತೀಯ ಮಹಿಳಾ ಕ್ರಿಕೆಟ್ ತಂಡ ಎಂಟನೇ ಬಾರಿಗೆ ಏಷ್ಯಾಕಪ್ ಎತ್ತಿ ಹಿಡಿದು ಇತಿಹಾಸ ಬರೆದಿದೆ. ಆದರೆ, ಈ ಬಾರಿ ಕಪ್ ಗೆದ್ದಿದ್ದಕ್ಕಿಂತ ಹೆಚ್ಚು ಸೌಂಡ್ ಮಾಡಿದ್ದು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಡೆದ ಒಂದು ಘಟನೆ.
ಪ್ರಶಸ್ತಿ ಕೊಡುವ ವೇಳೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ, ಪಾಕಿಸ್ತಾನದ ಮೊಹ್ಸಿನ್ ನಖ್ವಿ ಕೈಯಿಂದ ಟ್ರೋಫಿ ತಗೊಳ್ಳೋಕೆ ಟೀಮ್ ಇಂಡಿಯಾ ‘ನೋ’ ಎಂದಿದೆ. ಏನೇ ಆಗಲಿ ದೇಶದ ಸ್ವಾಭಿಮಾನಕ್ಕಿಂತ ಈ ಟ್ರೋಫಿ ದೊಡ್ಡದಲ್ಲ ಎಂದು ಹರ್ಮನ್ಪ್ರೀತ್ ಪಡೆ ಸಾಬೀತುಪಡಿಸಿದೆ.
ಕಳೆದ ವರ್ಷ ಏಪ್ರಿಲ್ನಲ್ಲಿ ನಡೆದ ಪಹಲ್ಗಾಮ್ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ತೀರಾ ಹದಗೆಟ್ಟು ಹೋಗಿದೆ. ಬಹುರಾಷ್ಟ್ರೀಯ ಟೂರ್ನಿಗಳಲ್ಲಿ ಆಡುವುದು ಬೇರೆ, ಆದರೆ ಭಾರತದ ವಿರುದ್ಧ ಕೆಲಸ ಮಾಡುವ ವ್ಯಕ್ತಿಗಳಿಂದ ಪ್ರಶಸ್ತಿ ಸ್ವೀಕರಿಸುವುದು ನಮಗೆ ಇಷ್ಟವಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಖಡಕ್ ಆಗಿ ಹೇಳಿದ್ದಾರೆ. ಪುರುಷರ ತಂಡ ಕಳೆದ ವರ್ಷ ತಗೆದುಕೊಂಡ ಅದೇ ಕಠಿಣ ನಿರ್ಧಾರಕ್ಕೆ ಈಗ ಮಹಿಳಾ ತಂಡ ಸಪೋರ್ಟ್ ಮಾಡಿ, ‘ನಮ್ಮ ದೇಶವೇ ನಮಗೆ ಮೊದಲು’ ಎಂದು ತೋರಿಸಿಕೊಟ್ಟಿದ್ದಾರೆ.
ಲಂಕಾವನ್ನು 72 ರನ್ಗಳಿಂದ ಸೋಲಿಸಿದ ಹರ್ಮನ್ಪ್ರೀತ್ ಕೌರ್ ಪಡೆ, ಮೈದಾನದಲ್ಲಿ ಗ್ರ್ಯಾಂಡ್ ಆಗಿ ಸಂಭ್ರಮ ಆಚರಿಸಿದೆ. ಸಮಾರಂಭಕ್ಕೂ ಮುನ್ನ ಈ ಟ್ರೋಫಿ ವಿಚಾರವನ್ನು ಬಗೆಹರಿಸಲು ಕಷ್ಟಪಟ್ಟು ಟ್ರೈ ಮಾಡಲಾಗಿತ್ತು. ಆದರೆ ಅದ್ಯಾವುದೂ ವರ್ಕೌಟ್ ಆಗಲಿಲ್ಲ. ಸೈಕಿಯಾ ಅವರು ಸರಳವಾಗಿ ಹೇಳಿದಂತೆ, “ಟ್ರೋಫಿಯನ್ನು ಯಾರೋ ಒಬ್ಬರು ಕೊಡ್ತಾರೆ ಅನ್ನೋದಕ್ಕಿಂತ ನಮ್ ಟೀಮ್ ಗೆಲ್ಲೋದು ನಮಗೆ ಮುಖ್ಯವಾಗಿತ್ತು. ಅದನ್ನು ಮಾಡಿ ತೋರಿಸಿದ್ದೇವೆ, ಈಗ ನಮಗೆ ಯಾವುದೇ ಬೇಸರ ಇಲ್ಲ!” ಎಂದು ಹೇಳಿದ್ದಾರೆ.
ಗೆಲುವಿನ ಖುಷಿಯ ಜೊತೆಗೆ ದೇಶದ ಗೌರವವನ್ನು ಎತ್ತಿಹಿಡಿದ ನಮ್ಮ ಸಿಂಹಿಣಿಯರ ಈ ದಿಟ್ಟತನಕ್ಕೆ ದೇಶಾದ್ಯಂತ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.



