ಹೊಸದಿಗಂತ ವರದಿ ಅಂಕೋಲಾ:
ದುಬಾರಿ ಬೈಕುಗಳನ್ನು ಪಟ್ಟಣದ ರಸ್ತೆಗಳಲ್ಲಿ ವ್ಹೀಲಿಂಗ್ ಮಾಡುವ ಕೃತ್ಯಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದ್ದು, ಪೊಲೀಸರು ಕಡಿವಾಣ ಹಾಕಲು ಪಣ ತೊಟ್ಟಿದ್ದಾರೆ. ಅಪಾಯಕಾರಿ ರೀತಿಯಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಯುವಕನ ಮೇಲೆ ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅಗ್ರಗೋಣ ಜೂಗ ನಿವಾಸಿ ವಿಶಾಲ ಗಂಗಾಧರ ಹರಿಕಂತ್ರ (20) ಎಂಬಾತ ರಸ್ತೆಯಲ್ಲಿ ಜನ ದಟ್ಟಣೆ ಇರುವಾಗಲೇ ಮೀನು ಮಾರುಕಟ್ಟೆ ಕಡೆಯಿಂದ ಅಂಬಾರಕೊಡ್ಲ ರಸ್ತೆ ಕಡೆ ಕೆಟಿಎಂ ಬೈಕ್ ಮೇಲೆ ಅಜಾಗರೂಕತೆಯಿಂದ ಚಲಾಯಿಸಿ ವೀಲ್ಹಿಂಗ್ ಮಾಡಿದ್ದು ಜನರ ಪ್ರಾಣಕ್ಕೆ ಕುತ್ತು ತರುವಂತಿತ್ತು.
ಯುವಕನ ಕೃತ್ಯ ಗಮನಕ್ಕೆ ಬಂದ ಅಂಕೋಲಾ ಪೊಲೀಸರು ಯುವಕನ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಕಳೆದ ವರ್ಷ ಇದೇ ಬೈಕ್ ಬಡಿದು ಬೆಟ್ಕುಳಿಯಲ್ಲಿ ವ್ಯಕ್ತಿಯೊಬ್ಬರು ತೀವ್ರವಾಗಿ ಗಾಯಗೊಂಡಿದ್ದರು.
ಅಪಾಯಕಾರಿ ರೀತಿಯಲ್ಲಿ ಬೈಕ್ ಓಡಿಸುವ ಮೂಲಕ ಜನರ ಪ್ರಾಣಕ್ಕೆ ಸಂಚಕಾರ ತರುವ ಬೇಜವಾಬ್ದಾರಿಯುತ ಬೈಕ್ ಸವಾರರ ಮೇಲೆ ಕಠಿಣ ಕ್ರಮ ಜರುಗಿಸಿ ಲೈಸೆನ್ಸ್ ರದ್ದುಪಡಿಸಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.