ಹೊಸದಿಗಂತ ಡಿಜಿಟಲ್ ಡೆಸ್ಕ್:
2020 ರ ದೆಹಲಿ ಗಲಭೆಯಲ್ಲಿ ಕಾರ್ಯಕರ್ತರಾದ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಮತ್ತು ಇತರರ ಜಾಮೀನು ಅರ್ಜಿಗಳನ್ನು ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್ನಲ್ಲಿ ವಿರೋಧಿಸಿದ್ದರೆ.
ಈ ವೇಳೆ ಇತ್ತೀಚೆಗೆ ನಡೆದ ಕೆಂಪು ಕೋಟೆ ಬಳಿಯ ಸ್ಫೋಟ ಪ್ರಕರಣ ಹಾಗೂ ವೈಟ್ ಕಾಲರ್ ಭಯೋತ್ಪಾದನ ಮಾಡ್ಯೂಲ್ಅನ್ನು ಉಲ್ಲೇಖಿಸಿದರು.
ದೆಹಲಿ ಪೊಲೀಸರ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ವಿ ರಾಜು, ಸರ್ಕಾರದ ನಿಧಿಯನ್ನು ಬಳಸಿಕೊಂಡು ವೈದ್ಯರು, ಇಂಜಿನಿಯರ್ಗಳಾಗುವ ವ್ಯಕ್ತಿಗಳು ನಂತರ ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಪ್ರವೃತ್ತಿ ಸದ್ಯ ಹೊರಮೊಮ್ಮಿದೆ ಎಂದು ಹೇಳಿದರು.
ಎಎಸ್ಜಿ, ಬುದ್ಧಿಜೀವಿಗಳು ಭಯೋತ್ಪಾದಕರಾದಾಗ, ಅವರು ಸಾಮಾನ್ಯ ಭಯೋತ್ಪಾದಕರಿಗಿಂತ ಹೆಚ್ಚು ಅಪಾಯಕಾರಿಯಾಗುತ್ತಾರೆ. ಈ ಶಿಕ್ಷಿತರು ವೈದ್ಯರಾಗಲು ಸರ್ಕಾರದ ಹಣವನ್ನು ಶಿಷ್ಯವೇತನವನ್ನು ಬಳಸಿಕೊಳ್ಳುತ್ತಾರೆ. ನಂತರ ಅವರು ರಾಷ್ಟ್ರವಿರೋಧಿಕೃತ್ಯಗಳನ್ನು ಮಾಡುತ್ತಾರೆ. ಇಂಥವರು ಹೆಚ್ಚು ಅಪಾಯಕಾರಿ ಎಂದು ಎಎಸ್ಜಿ ರಾಜು ಹೇಳಿದರು.
ಹರಿಯಾಣದ ಅಲ್-ಫಲಾಹ್ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜೈಶ್-ಎ-ಮೊಹಮ್ಮದ್ ಬೆಂಬಲಿತ ವೈಟ್ ಕಾಲರ್ ಭಯೋತ್ಪಾದಕ ಮಾಡ್ಯೂಲ್ ಅನ್ನು ಭದ್ರತಾ ಸಂಸ್ಥೆಗಳು ಭೇದಿಸಿದ ಬೆನ್ನಲ್ಲೇ ಸುಪ್ರೀಂ ಕೋರ್ಟ್ನಲ್ಲಿ ಈ ಹೇಳಿಕೆಗಳು ಬಂದಿವೆ.
ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್.ವಿ. ಅಂಜಾರಿಯಾ ಅವರ ಪೀಠವು ಇಮಾಮ್, ಖಾಲಿದ್ ಮತ್ತು ಇತರ ಮೂವರ ಜಾಮೀನು ಅರ್ಜಿಗಳನ್ನು ವಿಚಾರಣೆ ನಡೆಸುತ್ತಿದ್ದಾಗ ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್ನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದರು.
ದೆಹಲಿ ಗಲಭೆ ಕೇಸ್ ವಿಚಾರಣೆ
ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (CAA) ಯ ವಿರುದ್ಧ ನಡೆದ ಕೋಮು ಗಲಭೆಗೆ ಕಾರಣವಾದ ದೊಡ್ಡ ಪಿತೂರಿಯ ಭಾಗವಾಗಿದ್ದ ಆರೋಪದ ಮೇಲೆ ಇಮಾಮ್ ಮತ್ತು ಖಾಲಿದ್ ವಿರುದ್ಧ ಕಠಿಣ ಭಯೋತ್ಪಾದನಾ ವಿರೋಧಿ ಕಾನೂನು UAPA ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಹಿಂಸಾಚಾರದಲ್ಲಿ 50 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು ಮತ್ತು 700 ಕ್ಕೂ ಹೆಚ್ಚು ಜನರು ಗಾಯಗೊಂಡರು.
ವಿಚಾರಣೆಯ ಸಮಯದಲ್ಲಿ, ದೆಹಲಿ ಪೊಲೀಸರು ಹಿಂಸಾಚಾರವು ಸ್ವಯಂಪ್ರೇರಿತವಲ್ಲ, ಬದಲಾಗಿ “ಸಂಯೋಜಿತ, ಪೂರ್ವ ಯೋಜಿತ ಮತ್ತು ಉತ್ತಮವಾಗಿ ವಿನ್ಯಾಸಗೊಳಿಸಲಾದ” ದಾಳಿ ಎಂದು ಪ್ರತಿಪಾದಿಸಿದರು.
ಮಸೂದೆ ಅಂಗೀಕಾರವಾಗುವ ಮೊದಲು ಶಾರ್ಜೀಲ್ ಇಮಾಮ್ ಸಿಎಎ ವಿರುದ್ಧ “ಪ್ರಚೋದನಕಾರಿ ಭಾಷಣ” ಮಾಡುತ್ತಿರುವ ವೀಡಿಯೊಗಳನ್ನು ಎಎಸ್ಜಿ ತೋರಿಸಿದರು.
ಎಎಸ್ಜಿ ರಾಜು ಅವರು ಇಮಾಮ್ ಎಂಜಿನಿಯರಿಂಗ್ ಪದವೀಧರನಾಗಿದ್ದಾನೆ ಎಂದು ತಿಳಿಸಿದರು.’ಇತ್ತೀಚಿನ ದಿನಗಳಲ್ಲಿ, ವೈದ್ಯರು, ಎಂಜಿನಿಯರ್ಗಳು ತಮ್ಮ ವೃತ್ತಿಯನ್ನು ಮಾಡದೆ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಪ್ರವೃತ್ತಿ ಶುರುವಾಗಿದೆ’ ಎಂದು ಅವರು ಹೇಳಿದರು.
ದೆಹಲಿಗೆ ಸರಬರಾಜುಗಳನ್ನು ನಿರ್ಬಂಧಿಸಲು ಮತ್ತು ಈಶಾನ್ಯವನ್ನು ಭಾರತದ ಉಳಿದ ಭಾಗಗಳಿಗೆ ಸಂಪರ್ಕಿಸುವ ಕಿರಿದಾದ ಭೂಪ್ರದೇಶವಾದ ಅಸ್ಸಾಂನಲ್ಲಿ ಚಿಕನ್ ನೆಕ್ಅನ್ನು ಆರ್ಥಿಕವಾಗಿ ಹತ್ತಿಕ್ಕಲು ಕಾರ್ಯಕರ್ತರು ಬಯಸಿದ್ದರು ಎಂದು ASG ತಿಳಿಸಿದ್ದಾರೆ. ಆಡಳಿತ ಬದಲಾವಣೆಯೇ ದೊಡ್ಡ ಉದ್ದೇಶ ಎಂದು ಅವರು ಹೇಳಿದರು.

