ಹೊಸದಿಗಂತ ಡಿಜಿಟಲ್ ಡೆಸ್ಕ್:
ಬರೋಬ್ಬರಿ 522 ದಿನಗಳಿಂದ ಉಕ್ರೇನ್ – ರಷ್ಯಾ ನಡುವೆ ಯುದ್ಧ ನಡೆಯುತ್ತಿದ್ದು, ಈಗಾಗಲೇ ಯುದ್ಧಕ್ಕೆ ಅಂತ್ಯ ಹಾಡಲು ಭಾರತ ಸೇರಿದಂತೆ ಹಲವು ದೇಶಗಳು ಕರೆ ನೀಡಿವೆ ಆದರೆ ಸಾಧ್ಯವಾಗಿಲ್ಲ.
ಇತ್ತ ಇದುವರೆಗೆ ರಷ್ಯಾ ಸಂಪೂರ್ಣ ಮೇಲುಗೈ ಸಾಧಿಸಿಲ್ಲ ಉಕ್ರೇನ್ ಕೂಡ ಧೈರ್ಯದಿಂದ ಯುದ್ಧ ಎದುರಿಸಿದೆ ಹೊರತು ಶರಣಾಗಿಲ್ಲ. ಪ್ರತಿ ದಿನ ಉಕ್ರೇನ್ ಮೇಲೆ ಬಾಂಬ್ ದಾಳಿ, ಮಿಸೈಲ್ ದಾಳಿ ನಡೆಯುತ್ತಲೇ ಇದೆ. ಅತ್ತ ಉಕ್ರೇನ್ ಕೂಡ ಪ್ರತಿದಾಳಿ ನಡೆಸುತ್ತಿದೆ.
ಇದೀಗ ಈ ಎಲ್ಲಾ ಬೆಳವಣಿಗೆ ಬಳಿಕ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮೊದಲ ಬಾರಿಗೆ ಯುದ್ಧ ನಿಲ್ಲಿಸುವ ಮಾತನಾಡಿದ್ದಾರೆ. ಆದರೆ ಯುದ್ಧ ನಿಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ಕಾರಣವನ್ನೂ ನೀಡಿದ್ದಾರೆ.
ಸೈಂಟ್ ಪೀಟರ್ಸ್ಬರ್ಗ್ನಲ್ಲಿ ಆಫ್ರಿಕನ್ ನಾಯಕರ ಜೊತೆ ಮಹತ್ವದ ಮಾತುಕತೆ ನಡೆಸಿದ ಪುಟಿನ್, ಯುದ್ಧ ನಿಲ್ಲಿಸುವ ಮಾತನಾಡಿದ್ದಾರೆ. ಆಫ್ರಿಕಾ ನಾಯಕರು ಶಾಂತಿ ಸ್ಥಾಪನೆಗೆ ಮುಖ್ಯ ಪಾತ್ರ ವಹಿಸುತ್ತಿದ್ದಾರೆ. ಆಫ್ರಿಕನ್ ನಾಯಕರ ಶಾಂತಿ ಮಾತುಕತೆಗೆ ಮಾಸ್ಕೋ ಬದ್ಧವಾಗಿದೆ. ಶಾಂತಿ ಸ್ಥಾಪನೆಗೆ ಮಾಸ್ಕೋ ಎಲ್ಲಾ ಪ್ರಯತ್ನ ಮಾಡುತ್ತಿದೆ. ಆದರೆ ಉಕ್ರೇನ್ ನಡೆಸುತ್ತಿರುವ ದಾಳಿಯಿಂದ ರಷ್ಯಾಗೆ ಯುದ್ಧ ನಿಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ಪುಟಿನ್ ಹೇಳಿದ್ದಾರೆ.
ಆಫ್ರಿಕನ್ ನಾಯಕರ ಜೊತೆಗಿನ ಮಾತುಕತೆ ಬಳಿಕ ಸುದ್ದಿಗೋಷ್ಠಿ ನಡೆಸಿದ ವ್ಲ ಪುಟಿನ್, ಯಾವುದೇ ದೇಶದ ಜೊತೆ ಶಾಂತಿ ಮಾತುಕತೆಯನ್ನು ರಷ್ಯಾ ಅಲ್ಲಗೆಳೆಯುವುದಿಲ್ಲ. ಜೊತೆಗೆ ಈ ವಿಚಾರವನ್ನು ಕಡೆಗಣಿಸುವುದಿಲ್ಲ . ರಷ್ಯಾ ಶಾಂತಿ ಮಾತುಕತೆಗೆ ಸದಾ ಸಿದ್ಧವಿದೆ. ಆದರೆ ಉಕ್ರೇನ್ ಸೇನೆ ನಡೆಸುತ್ತಿರುವ ದಾಳಿಯಿಂದ ನಾವು ಪ್ರತಿದಾಳಿ ನಡೆಸಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಯುದ್ಧ ಮುಂದುವರಿಯುತ್ತಿದೆ ಎಂದು ಪುಟಿನ್ ಹೇಳಿದ್ದಾರೆ.
ಇತ್ತೀಚೆಗೆ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಉಕ್ರೇನ್ ಸಚಿವರ ಜೊತೆ ಮಹತ್ವದ ಮಾತುಕತೆ ನಡೆಸಿದ್ದರು. ಈ ವೇಳೆ ಯುದ್ಧ ನಿಲ್ಲಿಸಿ ಶಾಂತಿಮಾತುಕತೆಗೆ ಒತ್ತು ನೀಡಿದ್ದರು.