ಮಳೆ ಜೋರಾಗಿದೆ. ಹವಾಮಾನದಲ್ಲಿ ತೀವ್ರ ಬದಲಾವಣೆ ದಿನ ದಿನವೂ ಆಗುತ್ತಿದೆ. ಶೀತ, ಜ್ವರ, ತಲೆನೋವು ಮಾಮೂಲಿ.ಜೊತೆಗೆ ಹೊಟ್ಟೆ ಸಮಸ್ಯೆ, ಜೀರ್ಣದ ಸಮಸ್ಯೆಗಳೂ ಉದ್ಭವವಾಗುತ್ತಿವೆ. ನೀವು ಸೇವಿಸುವ ಆಹಾರದಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಿದರೆ ಈ ಎಲ್ಲಾ ಸಮಸ್ಯೆಯಿಂದ ಮುಕ್ತಿ ಹೊಂದಬಹುದು. ಹಾಗಾದ್ರೆ ನಾವೇನು ಮಾಡ್ಬೇಕು ನೋಡೋಣ.
ಅನೇಕರಿಗೆ ಮಳೆಗಾಲ ಬಂತೆಂದರೆ ಉಸಿರಾಟದ ಸಮಸ್ಯೆ, ಮೂಗು ಕಟ್ಟುವುದು, ಶೀತ, ಜಠರದ ಬಾಧೆ, ವಾಯು, ಸ್ನಾಯುನೋವು ಹೀಗೆ ಅನೇಕ ತೊಂದರೆಗಳು ಮಾಮೂಲಿಯಾಗಿ ಕಂಡುಬರುತ್ತಿರುತ್ತವೆ. ಅನೇಕ ಸಾಂಕ್ರಾಮಿಕ ರೋಗಭೀತಿಯೂ ಮೂಡುತ್ತಿರುತ್ತವೆ. ಅವೆಲ್ಲವನ್ನು ನಮ್ಮ ಆಹಾರಚರ್ಯೆಯ ಮೂಲಕ ಸರಿಪಡಿಸಬಹುದಾಗಿದೆ.
ಪ್ರತಿದಿನ ಕುಡಿಯುವ ಚಹಾದ ಬದಲಾಗಿ ನೀವು ಶುಂಠಿ ಚಹಾವನ್ನು ಸೇವಿಸುವುದರಿಂದ ಅನೇಕ ರೋಗಗಳಿಂದ ಮುಕ್ತರಾಗಬಹುದು. ಜೊತೆಗೆ ರೋಗನಿರೋಧಕ ಶಕ್ತಿಯಿಂದ ನಿಮ್ಮ ದೇಹವನ್ನು ಇನ್ನಷ್ಟು ಆರೋಗ್ಯಪೂರ್ಣವಾಗಿ ಕಾಪಾಡಿಕೊಳ್ಳಬಹುದಾಗಿದೆ. ಬಿಸಿ ಬಿಸಿ ಒಂದು ಕಪ್ ಶುಂಠಿ ಚಹಾ ಸೇವನೆಯಿಂದ ದೇಹದಲ್ಲಿ ಸಿರೋಟೋನಿನ್ ಮಟ್ಟ ಹೆಚ್ಚಾಗುತ್ತದೆ. ಒಂದು ನರಪ್ರೇಕ್ಷಕವಾಗಿದ್ದು ಅದು ಮನಸ್ಥಿತಿ ಮತ್ತು ಭಾವನೆಗಳನ್ನು ನಿಯಂತ್ರಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸುವ ಮೂಲಕ, ಶುಂಠಿಯು ಒತ್ತಡವನ್ನು ಕಡಿಮೆ ಮಾಡುವ ಕೆಲಸ ಮಾಡುತ್ತದೆ.