ಹೊಸದಿಗಂತ ವರದಿ ವಿಜಯಪುರ:
ಜಿಲ್ಲೆಯಲ್ಲಿ ಕಳ್ಳತನದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿ, 3 ಕಂಟ್ರಿ ಪಿಸ್ತೂಲ್, 12 ಜೀವಂತ ಗುಂಡುಗಳನ್ನು ಜಪ್ತಿ ಮಾಡಿರುವ ಘಟನೆ ನಡೆದಿದೆ.
ಜಿಲ್ಲೆಯ ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದ ಪ್ರಶಾಂತ ಸಿದ್ದರಾಮ ನಾವಿ (31) ಬಂಧಿತ ಆರೋಪಿ.
ಆರೋಪಿ ಪ್ರಶಾಂತ ನಾವಿ, ಜಿಲ್ಲೆಯ ಸಿಂದಗಿ ತಾಲೂಕಿನ ಚಾಂದಕವಟೆ ಗ್ರಾಮದ ಬಳಿ ಅನುಮಾನಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದ ವೇಳೆ ಪೊಲೀಸರು ಹಿಡಿದು ವಿಚಾರಣೆಗೆ ಒಳಪಡಿಸಿದಾಗ, ವಿಚಾರಣೆ ಸ್ಥಳದಲ್ಲಿ ಒಂದು ಕಂಟ್ರಿ ಪಿಸ್ತೂಲ್ 4 ಸಜೀವ ಗುಂಡು ಪತ್ತೆಯಾಗಿದ್ದು, ಬಳಿಕ ಆತನಿಗೆ ಕಸ್ಟಡಿಗೆ ಪಡೆದು ವಿಚಾರಣೆ ಮಾಡಿದಾಗ, ಯಂಕಂಚಿ ಗ್ರಾಮದ ಮನೆಯಲ್ಲಿ ಕಳ್ಳತನ ಮಾಡಿದ್ದ ಪ್ರಕರಣ ಬಯಲಿಗೆ ಬಂದಿದೆ.
ಆರೋಪಿ ತನ್ನ ದೇವರ ನಿಂಬರಗಿ ಗ್ರಾಮದ ಮನೆಯಲ್ಲಿಟ್ಟಿದ್ದ ಇನ್ನೆರೆಡು ಕಂಟ್ರಿ ಪಿಸ್ತೂಲ್ ಹಾಗೂ 8 ಸಜೀವ ಗುಂಡುಗಳ ಬಗ್ಗೆ ಬಾಯಿ ಬಿಟ್ಟಿದ್ದಾನೆ.
ಬಂಧಿತನಿಂದ ಒಟ್ಟು 70 ಗ್ರಾಂ ಬಂಗಾರದ ಆಭರಣಗಳು, 3 ಕಂಟ್ರಿ ಪಿಸ್ತೂಲ್, 12 ಸಜೀವ ಗುಂಡುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಎಸ್ ಪಿ ಲಕ್ಷ್ಮಣ ನಿಂಬರಗಿ ಅಭಿನಂದಿಸಿದ್ದಾರೆ.