ಹೊಸದಿಗಂತ ಡಿಜಿಟಲ್ ಡೆಸ್ಕ್:
ದೂರದ ಇರಾನ್-ಇಸ್ರೇಲ್ ಸಂಘರ್ಷದಿಂದ ನಮ್ಮ ದೇಶದಲ್ಲಿ ಗ್ಯಾಸ್ ಸಿಲಿಂಡರ್ ಸಮಸ್ಯೆ ಎದುರಾಗಿದೆ. ವಿಶ್ವದ ಇಡೀ ದೇಶಗಳು ಒಂದಿಲ್ಲಾ ಒಂದು ರೀತಿಯಲ್ಲಿ ಕನೆಕ್ಟ್ ಆಗಿದ್ದು, ಎರಡು ದೇಶಗಳ ನಡುವಣ ಯುದ್ಧದ ಎಫೆಕ್ಟ್ ಭಾರತಕ್ಕೂ ತಟ್ಟಿದೆ.
ಜಾಗತಿಕ ಮಟ್ಟದಲ್ಲಿ ಎದುರಾಗಿರುವ ಎಲ್ಪಿಜಿ ಸಿಲಿಂಡರ್ ಅಭಾವದಿಂದ ಬೆಂಗಳೂರಿನ ಬನಶಂಕರಿ ದೇವಸ್ಥಾನದ ಅನ್ನದಾಸೋಹಕ್ಕೆ ಬ್ರೇಕ್ ಬಿದ್ದಿದೆ. ಹಲವು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದ್ದ ಅನ್ನಪ್ರಸಾದ ಇದೀಗ ಗ್ಯಾಸ್ ಸಿಲಿಂಡರ್ ಇಲ್ಲದೆ ಬಂದ್ ಆಗಿದೆ.
ಅಮ್ಮನ ದರ್ಶನಕ್ಕೆ ಬರುವ ಸಾವಿರಾರು ಭಕ್ತರು ಪ್ರಸಾದವಿಲ್ಲದೆ ಬರಿಗೈಲಿ ಹಿಂದಿರುಗುವಂತಾಗಿದ್ದು, ಅಂತರಾಷ್ಟ್ರೀಯ ಮಟ್ಟದ ಬಿಕ್ಕಟ್ಟು ದೇವರ ಪ್ರಸಾದಕ್ಕೂ ಅಡ್ಡಿಯಾಗಿರುವುದು ಭಕ್ತರಲ್ಲಿ ಬೇಸರ ಮೂಡಿಸಿದೆ.
ಬನಶಂಕರಿ ದೇವಸ್ಥಾನದಲ್ಲಿ ಪ್ರತಿದಿನ ಸಾವಿರಾರು ಜನರಿಗೆ ಅಡುಗೆ ತಯಾರಿಸಲು ಹೆಚ್ಚಿನ ಸಂಖ್ಯೆಯ ವಾಣಿಜ್ಯ ಸಿಲಿಂಡರ್ಗಳ ಅವಶ್ಯಕತೆಯಿದೆ. ಆದರೆ ಸಮಯಕ್ಕೆ ಸರಿಯಾಗಿ ಗ್ಯಾಸ್ ಲಭ್ಯವಾಗುತ್ತಿಲ್ಲ. ಅನಿವಾರ್ಯ ಕಾರಣಗಳಿಂದಾಗಿ ಅಡುಗೆ ತಯಾರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಸಿಲಿಂಡರ್ ಪೂರೈಕೆ ಸಹಜ ಸ್ಥಿತಿಗೆ ಬರುವವರೆಗೆ ಅನ್ನಪ್ರಸಾದ ವಿತರಣೆಯನ್ನು ನಿಲ್ಲಿಸಲು ದೇವಸ್ಥಾನ ಮಂಡಳಿ ನಿರ್ಧಾರ ಮಾಡಿದೆ.



