ಹೊಸದಿಗಂತ ವರದಿ ಮಂಡ್ಯ :
ಡೆತ್ನೋಟ್ ಬರೆದಿಟ್ಟು ತಾಯಿ ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಇಲ್ಲಿನ ನೆಹರುನಗರದಲ್ಲಿ ನಡೆದಿದೆ.
ತಾಯಿ ರಶ್ಮಿ (28) ಹಾಗೂ ಈಕೆಯ ಮಗಳು ದಿಶಾ (9) ಎಂಬುವರೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು.
ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ನೇಣು ಹಾಕಿಕೊಳ್ಳುವ ಮುನ್ನ ತನ್ನ ತಾಯಿಗೆ ಪತ್ರ ಬರೆದಿರುವ ರಶ್ಮಿ, ನನ್ನನ್ನು ಎಲ್ಲರೂ ಕ್ಷಮಿಸಿಬಿಡಿ ಎಂದು ಬರೆದಿದ್ದಾರೆ. ಜೊತೆಗೆ ಜೀವನದಲ್ಲಿ ಏನೂ ಸುಖ ಅನುಭವಿಸಿಲ್ಲ. ನನ್ನ ಗಂಡನ ಮನೆಯಲ್ಲೇ ಸಾಯಬೇಕಿತ್ತು. ನನ್ನಿಂದ ಯಾರಿಗೂ ತೊಂದರೆಯಾಗುವುದು ಬೇಡ ಎಂಬ ಕಾರಣಕ್ಕೆ ಬೇರೆ ಮನೆಗೆ ಬಂದು ಜೀವನ ಮಾಡುತ್ತಿದ್ದೆ. ಆದರೆ ಇಲ್ಲಿಯೂ ನನಗೆ ನೆಮ್ಮದಿ ಇಲ್ಲದಂತಾಯಿತು. ಇದರಿಂದ ಬೇಸತ್ತಿದ್ದೆ. ನನ್ನ ಮಗಳನ್ನು ಕೇಳಿದೆ, ಯಾರ ಜೊತೆಯಲ್ಲೂ ಇರಲ್ಲ ಎಂದಳು. ಅದಕ್ಕೆ ಅವಳನ್ನೂ ಕರೆದುಕೊಂಡು ಹೋಗುತ್ತಿದ್ದೇನೆ. ಕ್ಷಮಿಸಿ ಎಂದು ಪತ್ರದಲ್ಲಿ ತಿಳಿಸಿದ್ದಾಳೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವಗಳನ್ನು ಮಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ. ಈ ಸಂಬಂಧ ಪೂರ್ವ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.