ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರವು ಪಠ್ಯ ಪರಿಷ್ಕರಣೆಗೆ ಮುಂದಾಗಿದ್ದು, ಮಕ್ಕಳ ಅನುಕೂಲಕ್ಕೆ ತಕ್ಕಂತೆ ಪಠ್ಯ ಬದಲಾಯಿಸಿದರೆ ಅದರಲ್ಲಿ ತಪ್ಪೇನು? ಎಂದು ಕಾಂಗ್ರೆಸ್ ನಾಯಕಿ ಗೀತಾ ಶಿವರಾಜ್ಕುಮಾರ್ ಹೇಳಿದರು. ಈ ಮೂಲಕ ಸರ್ಕಾರದ ನಿರ್ಧಾರವನ್ನು ಅವರು ಸಮರ್ಥಿಸಿಕೊಂಡರು.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಠ್ಯಪುಸ್ತಕದಲ್ಲಿ ಒಳ್ಳೆಯ ವಿಚಾರಗಳು ಮಾತ್ರ ಇರಬೇಕು. ಈ ಕಾರಣಕ್ಕಾಗಿ ಪಠ್ಯಪುಸ್ತಕ ಬದಲಾವಣೆ ಆದರೆ ಒಳ್ಳೆಯದು ಎಂದರು. ಒಂದೊಂದು ಸರ್ಕಾರ ಒಂದೊಂದು ರೀತಿಯಲ್ಲಿ ಪಠ್ಯ ಬದಲಾವಣೆ ಮಾಡುವ ಕ್ರಮದಿಂದ ಮಕ್ಕಳಲ್ಲಿ ಗೊಂದಲ ಆಗುವುದಿಲ್ಲವೇ? ಎಂಬ ಪ್ರಶ್ನೆಗೆ ಉತ್ತರ ನೀಡಲು ನಿರಾಕರಿಸಿದರು. ಮಕ್ಕಳ ಒಳ್ಳೆಯದಕ್ಕೆ ಪಠ್ಯ ಬದಲಾವಣೆ ಮಾಡಿದರೆ ಒಳ್ಳೆಯದು ಅಲ್ಲವೇ ಎಂದು ಹೇಳಿದರು.
ಬಳಿಕ ಸಿದ್ದರಾಮಯ್ಯ ಭೇಟಿ ವಿಚಾರವಾಗಿ ಮಾತನಾಡಿದ ಅವರು, “ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದು ಸೌಜನ್ಯಯುತ ಭೇಟಿಯಾಗಿತ್ತು ಅಷ್ಟೇ. ಚುನಾವಣಾ ಪ್ರಚಾರದ ನಂತರ ಭೇಟಿ ಮಾಡಿರಲಿಲ್ಲ. ಈ ಕಾರಣದಿಂದ ಅವರನ್ನು ಮೊನ್ನೆ ಭೇಟಿ ಮಾಡಿದ್ದೆವು ಎಂದು ತಿಳಿಸಿದರು.