ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲೆನಾಡಿನ ಸೌಂದರ್ಯಕ್ಕೆ ಮನಸೋಲದವರೇ ಇಲ್ಲ. ಇದೀಗ ದಕ್ಷಿಣ ಭಾರತದ ಸ್ಟಾರ್ ನಟಿ ಸಮಂತಾ ರುತ್ ಪ್ರಭು ಕೂಡ ಶಿವಮೊಗ್ಗದ ಹೊಸನಗರದಲ್ಲಿ ಬೀಡುಬಿಟ್ಟಿದ್ದಾರೆ. ತಮ್ಮ ಮುಂಬರುವ ಚಿತ್ರ ‘ಮಾ ಇಂಟಿ ಬಂಗಾರಂ’ ಚಿತ್ರೀಕರಣಕ್ಕಾಗಿ ಕರ್ನಾಟಕಕ್ಕೆ ಬಂದಿರುವ ಅವರು, ಇತ್ತೀಚೆಗೆ ಚಿತ್ರತಂಡದೊಂದಿಗೆ ಸಖತ್ ಆಗಿ ಹೋಳಿ ಹಬ್ಬವನ್ನು ಆಚರಿಸಿದ್ದಾರೆ.
ವಿಶೇಷವೆಂದರೆ, ಹೊಸನಗರದ ಬಸ್ ನಿಲ್ದಾಣದಲ್ಲೇ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಶೂಟಿಂಗ್ ಬಿಡುವಿನ ವೇಳೆ ಇಡೀ ಚಿತ್ರತಂಡ ಬಣ್ಣದಾಟದಲ್ಲಿ ಮುಳುಗಿತ್ತು. ಸಮಂತಾ ಅವರು ಕೈಯಲ್ಲಿ ಹೋಳಿ ಗನ್ ಹಿಡಿದು, ನಿರ್ದೇಶಕ ರಾಜ್ ನಿಡಿಮೋರು ಹಾಗೂ ಉಳಿದ ತಾಂತ್ರಿಕ ವರ್ಗದವರಿಗೆ ಬಣ್ಣ ಹಚ್ಚಿ ಸಂಭ್ರಮಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸದ್ಯ ಭಾರಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಸಮಂತಾ ಅವರ ಹುರುಪನ್ನು ಕಂಡು ಖುಷಿಯಾಗಿದ್ದಾರೆ.
ಸದಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇರುವ ಸಮಂತಾ, ಶೂಟಿಂಗ್ ನಡುವೆಯೂ ಇಂತಹ ಸಣ್ಣ ಪುಟ್ಟ ಕ್ಷಣಗಳನ್ನು ಆನಂದಿಸುತ್ತಾ ಅಭಿಮಾನಿಗಳಿಗೆ ಹತ್ತಿರವಾಗುತ್ತಿದ್ದಾರೆ.



