ದಿಗಂತ ವರದಿ ವಿಜಯಪುರ:
ಸಿಎಲ್’ಪಿ ಸಭೆಯಲ್ಲಿ ಯಾವುದೇ ರೀತಿ ಭಿನ್ನಾಭಿಪ್ರಾಯ ಉಂಟಾಗಿಲ್ಲ. ನಾವು ಆಂತರಿಕವಾಗಿ ಚರ್ಚೆ ಮಾಡಿದ್ದೇವೆ. ಯಾವುದೇ ಕಾರಣಕ್ಕೂ ನಮ್ಮಲ್ಲಿ ಭಿನ್ನಾಭಿಪ್ರಾಯವಿಲ್ಲ ಎಂದು ಜವಳಿ, ಸಕ್ಕರೆ ಹಾಗೂ ಎಪಿಎಂಸಿ ಖಾತೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಸಚಿವರ ಮೇಲೆ ಕೈ ಶಾಸಕರ ಅಸಮಾಧಾನ ವಿಚಾರ ಕುರಿತು ಸುದ್ದಿಗಾರರೊಂದಿಗೆ ಸೋಮವಾರ ನಗರದಲ್ಲಿ ಮಾತನಾಡಿದ ಅವರು, ಶಾಸಕರಿಗೆ ಸಹಜವಾಗಿ ಕೆಲಸಗಳು ಆಗಬೇಕೆಂಬ ಒತ್ತಡವಿರುತ್ತದೆ. ಹೊಸ ಸರ್ಕಾರ ಬಂದ ವೇಳೆ ವರ್ಗಾವಣೆ ಬೇಡಿಕೆ ಇರುತ್ತದೆ. ವರ್ಗಾವಣೆ ವಿಚಾರದಲ್ಲಿ ಸಚಿವರು 6 ಪರ್ಸೆಂಟ್ ಮಾತ್ರ ವರ್ಗಾವಣೆ ಮಾಡಬೇಕೆಂಬ ನಿಯಮದ ಕಾರಣ ಹೆಚ್ಚು ವರ್ಗಾವಣೆ ಮಾಡಲಾಗಿಲ್ಲ.
ಈ ವಿಚಾರದಲ್ಲಿ ಸಿಎಲ್’ಪಿಯಲ್ಲಿ ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಿದ್ದಾರೆ. ಇಂಥ ಸಮಸ್ಯೆಗಳನ್ನು ಬಗೆ ಹರಿಸುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ ಎಂದರು.
ಕೆಲ ಸಚಿವರಿಗೆ ಹೈಕಮಾಂಡ್ ದೆಹಲಿಗೆ ಬುಲಾವ್
ಈ ಕುರಿತು ಪ್ರತಿಕ್ರಿಯಿಸಿ, ಮಂತ್ರಿಮಂಡಲ ರಚನೆಯಾದ ಮೇಲೆ ನಾವು ನಮ್ಮ ಹೈಕಮಾಂಡ್ ಗೆ ಭೇಟಿಯಾಗಿಲ್ಲ.
ಬೆಂಗಳೂರಿಗೆ ರಾಹುಲ್ ಗಾಂಧಿ ಅವರು ಆಗಮಿಸಿದ್ದ ಸಂದರ್ಭದಲ್ಲಿ ಭೇಟಿಯಾಗಲು ಆಗಲಿಲ್ಲ.
ಕೇರಳದ ಮಾಜಿ ಮುಖ್ಯಮಂತ್ರಿ ನಿಧನರಾದ ಕಾರಣ ರಾಹುಲ್ ಅವರ ಭೇಟಿ ರದ್ದಾಯಿತು. ಈ ಕಾರಣದಿಂದ ಇದೀಗ ನಾವು ದೆಹಲಿಗೆ ಹೋಗಿ ರಾಹುಲ್ ಗಾಂಧಿ ಸೇರಿದಂತೆ ಇನ್ನಿತರ ವರಿಷ್ಠರನ್ನು ಭೇಟಿಯಾಗಿ ಬರುತ್ತೇವೆ ಎಂದರು.