ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಲವು ಕಳವು ಪ್ರಕರಣಗಳ ಅರೋಪಿಯೋರ್ವ ತನ್ನನ್ನು ಬಂಧಿಸಲು ಬಂದ ಪೊಲೀಸರಿಂದಲೇ ಪಿಸ್ತೂಲ್ ಎಗರಿಸಿ ಪರಾರಿಯಾಗಿರುವ ಘಟನೆ ಕಲಬುರ್ಗಿ ಜಿಲ್ಲೆಯ ಅಫಜಲಪುರ ಪಟ್ಟಣದಲ್ಲಿ ನಡೆದಿದ್ದು, ಈ ಆತಂಕಕಾರಿ ಬೆಳವಣಿಗೆ ನಾಗರಿಕರಿಗೆ ಶಾಕ್ ನೀಡಿದೆ.
ಏನಿದು ಘಟನೆ?
ಖಾಜಪ್ಪ ಎಂಬಾತನ ಮೇಲೆ ಬೆಂಗಳೂರು, ಅಫಜಲಪುರ, ಕಲಬುರಗಿ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ 20ಕ್ಕೂ ಅಧಿಕ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಬೆಂಗಳೂರಿನಲ್ಲಿ ದಾಖಲಾದ ಪ್ರಕರಣವೊಂದಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರಿಗೆ ಆತ ಅಫಜಲಪುರ ಪಟ್ಟಣದಲ್ಲಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿದೆ. ಈ ಸುಳಿವಿನ ಆಧಾರದಲ್ಲಿ ಪಟ್ಟಣಕ್ಕೆ ಬಂದಿದ್ದ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲು ಯತ್ನಿಸಿದ್ದಾರೆ. ಈ ವೇಳೆ ಆರೋಪಿ, ಪಿಎಸ್ಐ ಭೀಮರಾಯ ಬಂಕಲಿ ಅವರ ಸರ್ವೀಸ್ ಪಿಸ್ತೂಲ್ ಕಸಿದು ಪರಾರಿಯಾಗಿದ್ದಾನೆ.
ಲೋಡೆಡ್ ಪಿಸ್ತೂಲ್!
ಆರೋಪಿಯು ಎಗರಿಸಿರುವ ಪಿಸ್ತೂಲ್ ಪುಲ್ ಲೋಡೆಡ್ ಅಗಿದ್ದು, ಇದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ. ಇದೀಗ ಆತನ ಬಂಧನಕ್ಕಾಗಿ ಪೊಲೀಸರು ಎಲ್ಲೆಡೆ ಬಲೆ ಬೀಸಿದ್ದಾರೆ.