ಹೊಸದಿಗಂತ ವರದಿ, ಬನವಾಸಿ:
ಜಮೀನಿನ ವ್ಯಾಜ್ಯ ಮತ್ತು ಹಳೆ ದ್ವೇಷದ ಹಿನ್ನೆಲೆಯಲ್ಲಿ ಜಿಂಕೆ ಕೊಂಬು ಮತ್ತು ಶ್ರೀಗಂಧದ ತುಂಡುಗಳನ್ನು ಪಕ್ಕದ ಮನೆಯವನ ಕೊಟ್ಟಿಗೆಯಲ್ಲಿಟ್ಟು ಆತನ ಜೊತೆ ತಾನೂ ಬಂಧಿತನಾದ ಘಟನೆ ಬನವಾಸಿ ಸಮೀಪದ ಮಾಡನಗೇರಿಯಲ್ಲಿ ಶುಕ್ರವಾರ ನಡೆದಿದೆ.
ಇಲ್ಲಿಯ ಗಣಪತಿ ಕನ್ನಾ ಬಡಗಿ ಮನೆಯಲ್ಲಿ ಗಂಧದ ತುಂಡುಗಳು ಇರುವ ಕುರಿತು ಮಾಹಿತಿ ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಈ ವೇಳೆ 15 ಕೆಜಿಯಷ್ಟು ಶ್ರೀಗಂಧ, ಎರಡು ಜಿಂಕೆ ಕೊಂಬು ಸಿಕ್ಕಿದೆ.
ವಿಚಾರಣೆ ನಡೆಸಿದ ಬಳಿಕ ಪಕ್ಕದ ಮನೆಯ ಮಧುಕೇಶ್ವರ ಕೆರಿಯಾ ಮಡಿವಾಳ ಎಂಬವರು ಅತಿಕ್ರಮಣ ಜಾಗ ಮತ್ತು ಕಾಡಿನಿಂದ ಶ್ರೀಗಂಧ ತಂದು ಗಣಪತಿ ಬಡಗಿ ಮನೆ ಕೊಟ್ಟಿಗೆಯಲ್ಲಿ ಇಟ್ಟಿರುವ ಅಂಶ ಬೆಳಕಿಗೆ ಬಂದಿದೆ. ಪಕ್ಕದ ಮನೆಯ ಮಧುಕೇಶ್ವರ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಶ್ರೀಗಂಧ ಕಡಿದ ಜಾಗವೂ ಪತ್ತೆಯಾಗಿದೆ. ಈಗ ಇಬ್ಬರನ್ನೂ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.
ದಾಳಿಯಲ್ಲಿ ಡಿಎಫ್ ಒ. ಜಿ.ಆರ್ ಅಜ್ಜಯ್ಯ, ವಲಯ ಅರಣ್ಯಾಧಿಕಾರಿ ವರದ ರಂಗನಾಥ ಜಿ. ಹೆಚ್ ಹಾಗೂ ಸಿಬ್ಬಂದಿ ಭಾಗಿಯಾಗಿದ್ದರು.