ಹೊಸದಿಗಂತ ಮಳವಳ್ಳಿ:
ಕಾರಿನಲ್ಲಿ ಹಣ ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಗಮನ ಬೇರೆಡೆ ಸೆಳೆದ ಖದೀಮರು 5.5 ಲಕ್ಷ ರೂ. ಅಪಹರಿಸಿ ಪರಾರಿಯಾಗಿರುವ ಘಟನೆ ಪಟ್ಟಣದ ಸಿದ್ದಾರ್ಥನಗರ ಬಳಿ ನಡೆದಿದೆ.
ತಾಲ್ಲೂಕಿನ ಕ್ಯಾತೇಗೌಡನದೊಡ್ಡಿಯ ಕೆಂಪೇಗೌಡ ಎಂಬುವವರು ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದಾನೆ. ಗುರುವಾರ ಸಂಜೆ ಪಟ್ಟಣದ ಮೈಸೂರು ರಸ್ತೆಯ ಕೆನರಾ ಬ್ಯಾಂಕ್ ನಲ್ಲಿ 7.5 ಲಕ್ಷ ರೂ.ಹಣ ಡ್ರಾ ಮಾಡಿಕೊಂಡು ತಮ್ಮ ಕಾರಿನ ಮುಂದಿನ ಸೀಟ್ ನಲ್ಲಿ 5.5 ಲಕ್ಷ ರೂ.ನನ್ನು ಬ್ಯಾಗ್ ನಲ್ಲಿಟ್ಟಿದರು. ಉಳಿದ ಹಣವನ್ನು ಕಾರಿನ ಬೋರ್ಡ್ ನಲ್ಲಿ ಇಟ್ಟುಕೊಂಡು ಡಾ.ಬಿ.ಆರ್.ಅಂಬೇಡ್ಕರ್ ಭವನದ ರಸ್ತೆ ಮಾರ್ಗವಾಗಿ ತೆರಳುತ್ತಿದ್ದ ಎನ್ನಲಾಗಿದೆ.
ಸಿದ್ದಾರ್ಥನಗರ ಬಳಿ ರಸ್ತೆ ಹಂಪ್ಸ್ ಸಮೀಪ ಬೈಕ್ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಕಾರಿನಲ್ಲಿ ಆಯಿಲ್ ಸೋರಿಕೆಯಾಗುತ್ತಿದೆ ಎಂದು ಕೆಂಪೇಗೌಡ ಅವರಿಗೆ ಹೇಳಿದ್ದಾರೆ, ಕೆಂಪೇಗೌಡ ಕಾರಿನಿಂದ ಇಳಿದು ನೋಡುತ್ತಿದ್ದ ಸಂದರ್ಭದಲ್ಲಿ ಅವರಿಗೆ ಅರಿವಿಗೆ ಬಾರದಂತೆ ಮತ್ತೊಬ್ಬ ಮುಂದಿನ ಸೀಟ್ ನಲ್ಲಿದ್ದ 5.5 ಲಕ್ಷ ರೂ ಹಣವನ್ನು ಕದ್ದು ಪಾರಾರಿಯಾಗಿದ್ದಾರೆ. ಕಾರು ಚಾಲನೆ ಮಾಡಿಕೊಂಡು ಬ್ಯಾಗು ಗಮನಿಸಿದಾಗ ಹಣ ಇಲ್ಲದಿರುವ ಬಗ್ಗೆ ತಿಳಿದುಬಂದಿದೆ. ತಕ್ಷಣವೇ ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ವಸತಿ ನಿಲಯವೊಂದರ ಬಳಿಯ ಸಿಸಿಟಿವಿಯಲ್ಲಿ ಖದೀಮರು ಬೈಕ್ ತಿರುಗಿಸಿಕೊಂಡು ಹೋಗಿರುವ ದೃಶ್ಯ ಸೆರೆಯಾಗಿದೆ. ಖದೀಮರ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ. ಪಟ್ಟಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.