ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಯುದ್ಧದ ಎರಡನೇ ದಿನ ತುಸು ಧೃತಿಗೆಟ್ಟಂತೆ ಕಂಡುಬರುತ್ತಿದ್ದ ಉಕ್ರೇನ್ ಅಧ್ಯಕ್ಷ ವ್ಲೊದಿಮಿರ್ ಝೆಲೆನ್ಸ್ಕಿ, ಮೂರನೇ ದಿನ ಹೋರಾಟದ ಮಾತನಾಡಿದ್ದಾರೆ.
“ಶಸ್ತ್ರವನ್ನು ಕೆಳಗಿಡುವ ಮಾತೇ ಇಲ್ಲ. ನಮ್ಮ ಜನ ಹೋರಾಡುತ್ತಾರೆ. ನಾನಾಗಲೀ, ಸರ್ಕಾರದ ಪ್ರತಿನಿಧಿಗಳಾಗಲೀ ದೇಶ ತೊರೆಯುವ ಯೋಚನೆ ಮಾಡಿಲ್ಲ. ಇದು ನಮ್ಮ ನೆಲ, ನಮ್ಮ ದೇಶ. ನಾವು ಹೋರಾಡುತ್ತೇವೆ” ಎಂದು ಉಕ್ರೇನ್ ಅಧ್ಯಕ್ಷ ಬಿತ್ತರಿಸಿರುವ ವಿಡಿಯೊ ಸಂದೇಶ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
ಉಳಿದಂತೆ
• ಯುದ್ಧದಲ್ಲಿ ಸತ್ತವರ ಸಂಖ್ಯೆ 198ಕ್ಕೆ ಏರಿದೆ
• ಉಕ್ರೇನ್ ರಾಜಧಾನಿ ಕೀವ್ ಗೆ ಕೇವಲ 7 ಕಿಲೋಮೀಟರ್ ದೂರವಿರುವ ಕಾರ್ಯತಂತ್ರ ಸೂಕ್ಷ್ಮದ ಹೊಸ್ತೊಮಲ್ ವಾಯುನೆಲೆಯನ್ನು ವಶಪಡಿಸಿಕೊಂಡಿರುವುದಾಗಿ ರಷ್ಯ ಹೇಳಿದೆ.
• ರಾಜಧಾನಿ ಕೀವ್ ಸೇರಿದಂತೆ ಉಕ್ರೇನಿನ ಪ್ರಮುಖ ಪಟ್ಟಣಗಳ ಮೇಲೆ ರಷ್ಯದ ಕ್ಷಿಪಣಿ ದಾಳಿ ಮುಂದುವರಿದಿದೆ. ಉಕ್ರೇನಿನ ಆಗ್ನೇಯ ಭಾಗದಲ್ಲಿರುವ ಮೆಲಿಟೊಪೊಲ್ ಎಂಬ ನಗರವನ್ನು ರಷ್ಯ ಪಡೆಗಳು ವಶಪಡಿಸಿಕೊಂಡಿರುವುದಾಗಿ ರಷ್ಯ ಮಾಧ್ಯಮವೊಂದು ವರದಿ ಮಾಡಿದೆ. ಆದರೆ ಬ್ರಿಟನ್ ಮೂಲಗಳು ಇದನ್ನು ತಳ್ಳಿಹಾಕಿವೆ.
• ಉಕ್ರೇನ್ ಅನ್ನು ರಕ್ಷಿಸುವ ಪ್ರತಿ ನಾಗರಿಕನಿಗೂ ಸರ್ಕಾರ ಶಸ್ತ್ರ ಕೊಡುತ್ತದೆ ಎಂದು ಉಕ್ರೇನ್ ಅಧ್ಯಕ್ಷ ಹೇಳಿದ್ದಾರೆ.
• ರಾಜಧಾನಿ ಕೀವ್ ಬೀದಿಗಳಲ್ಲಿ ಕದನ ತೆರೆದುಕೊಂಡಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮದ ವರದಿಗಳು ಹೇಳುತ್ತಿವೆ.
• ಈ ನಡುವೆ, ಭಾರತವು ತನ್ನ ಪ್ರಜೆಗಳನ್ನು ರಕ್ಷಿಸಿ ತರುವ ಮಹಾಪ್ರಯಾಸ ಶುರುಮಾಡಿದ್ದು, ಉಕ್ರೇನಿನ ವಿವಿಧ ಭಾಗಗಳಿಂದ ರೊಮಾನಿಯಾ ತಲುಪಿದ್ದ 219 ಭಾರತೀಯರನ್ನು ಮೊದಲ ಭಾಗವಾಗಿ ಭಾರತಕ್ಕೆ ಕರೆತರಲಾಗುತ್ತಿದೆ.