ಕರ್ನಾಟಕದ ಜನರಿಗೆ ಈ ಸರ್ಕಾರ ಶಾಪ: ಕಾಂಗ್ರೆಸ್ ವಿರುದ್ಧ ಬೊಮ್ಮಾಯಿ ಕಿಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಿಡಿಕಾರಿದ್ದಾರೆ.

ಸರಣಿ ಟ್ವೀಟ್​ ಮಾಡಿರುವ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ‌ಮುಂಗಾರು ಮಳೆ ವೈಫಲ್ಯವಾಗಿ ಹಲವಾರು ಗ್ರಾಮದಲ್ಲಿ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದೆ ಮತ್ತು ಅಂತರ್ಜಲ ಕುಸಿದಿದೆ.ರೈತರ ಪಾಲಿಗೆ ಮುಂಗಾರು ವೈಫಲ್ಯ ಬಹಳ ದೊಡ್ಡ ಹೊಡೆತ ಕೊಟ್ಟಿದೆ. ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುವ ಬದಲು, ದ್ವೇಷದ ತೀರ್ಮಾನಗಳನ್ನು ತೆಗೆದುಕೊಂಡು ಸಂಕಷ್ಟದಲ್ಲಿರುವ ಕರ್ನಾಟಕದ ಜನರಿಗೆ ಈ ಸರ್ಕಾರ ಶಾಪವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದ್ವೇಷದ ಹಾಗೂ ತುಷ್ಟೀಕರಣ ರಾಜಕಾರಣ ಮಾಡುತ್ತಿದ್ದು, ಹಿಂದಿನ ಸರ್ಕಾರದ ತೀರ್ಮಾನಗಳನ್ನು ರದ್ದು ಮಾಡುವುದನ್ನೇ ತನ್ನ ಸಾಧನೆ ಎನ್ನುವಂತೆ ನಡೆದುಕೊಳ್ಳುತ್ತಿದೆ. ಸಮಾಜಕ್ಕೆ ಮಾರಕವಾಗಿದ್ದ ಮತಾಂತರ ನಿಷೇಧ ಕಾಯ್ದೆಯನ್ನು ರದ್ದು ಮಾಡುವ ತೀರ್ಮಾನ ತೆಗೆದುಕೊಂಡು ಯಾರ ಓಲೈಕೆ ಮಾಡುತ್ತಿದೆ? ಹೈಕಮಾಂಡ್ ಹಂಗಿನಲ್ಲಿ ಅಧಿಕಾರ ನಡೆಸುತ್ತಿರುವ ಸಿದ್ದರಾಮಯ್ಯ, ರಾಜ್ಯದ ಜನರ ಹಿತಾಸಕ್ತಿಗಿಂತ ಹೈಕಮಾಂಡ್ ಓಲೈಕೆಗೆ ಆದ್ಯತೆ ನೀಡುತ್ತಿರುವಂತಿದೆ.

ಪಠ್ಯ ಪುಸ್ತಕವನ್ನೂ ಪರಿಷ್ಕರಣೆಯ ಹೆಸರಲ್ಲಿ ರಾಷ್ಟ್ರ ಭಕ್ತ ಸಂಘಟನೆ ಸ್ಥಾಪಿಸಿ, ಎಲ್ಲರಲ್ಲೂ ದೇಶಭಕ್ತಿ ಬೆಳೆಯಲು ಕಾರಣವಾಗುವಂತಹ ಆರ್​ಎಸ್​ಎಸ್ ಸಂಘಟನೆ ಸ್ಥಾಪಿಸಿರುವ ಡಾ. ಕೇಶವ ಬಲರಾಮ್ ಹೆಡಗೇವಾರ ಹಾಗೂ ವೀರ ಸಾವರ್ಕರ್ ಅವರ ಕುರಿತ ಪಠ್ಯವನ್ನು ತೆಗೆದು ಹಾಕಲು ತೀರ್ಮಾನ ತೆಗೆದುಕೊಂಡಿರುವುದು ದೇಶದ್ರೋಹಕ್ಕೆ ಸಮಾನ ಎಂದು ಬಸವರಾಜ ಬೊಮ್ಮಾಯಿ ಅವರು ಗುಡುಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!