ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿರಿಯ ಗಾಯಕಿ ಆಶಾ ಭೋಸ್ಲೆ ಅವರ ಅಗಲಿಕೆಯಿಂದ ಭಾರತೀಯ ಚಿತ್ರರಂಗವೇ ದುಃಖದಲ್ಲಿ ಮುಳುಗಿದೆ. ಮುಂಬೈನ ಶಿವಾಜಿ ಪಾರ್ಕ್ನಲ್ಲಿ ನಡೆದ ಅಂತಿಮ ವಿಧಿವಿಧಾನಗಳಲ್ಲಿ ಅನೇಕ ಗಣ್ಯರು ಭಾಗವಹಿಸಿ ಕಣ್ಣೀರಿನ ನಮನ ಸಲ್ಲಿಸಿದರು.
ಆದರೆ ಈ ಭಾವುಕ ವಾತಾವರಣದ ಮಧ್ಯೆ ನಡೆದ ಒಂದು ಘಟನೆ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ನಟ ಜಾಕಿ ಶ್ರಾಫ್ ಪಾಪರಾಜಿಗಳ ಪ್ರಶ್ನೆಗೆ ಗರಂ ಆಗಿ ಪ್ರತಿಕ್ರಿಯಿಸಿದ ವಿಡಿಯೋ ಎಲ್ಲರ ಗಮನ ಸೆಳೆದಿದೆ.
ಸಚಿನ್ ತೆಂಡೂಲ್ಕರ್, ಆಮಿರ್ ಖಾನ್, ರಣವೀರ್ ಸಿಂಗ್, ಟಬು ಸೇರಿದಂತೆ ಹಲವು ಗಣ್ಯರು ಅಂತಿಮ ದರ್ಶನ ಪಡೆದ ಬಳಿಕ, ಅಲ್ಲಿಗೆ ಬಂದ ಜಾಕಿ ಶ್ರಾಫ್ ಅವರನ್ನು ಪಾಪರಾಜಿಗಳು ಸುತ್ತುವರೆದರು. ಈ ವೇಳೆ ಆಶಾ ಭೋಸ್ಲೆ ಅವರ ನಿಧನದ ಬಗ್ಗೆ “ನಿಮಗೆ ಹೇಗನ್ನಿಸುತ್ತಿದೆ?” ಎಂಬ ಪ್ರಶ್ನೆಯನ್ನು ಕೇಳಿದರು. ಈ ಪ್ರಶ್ನೆಯಿಂದ ಬೇಸರಗೊಂಡ ಜಾಕಿ ಶ್ರಾಫ್, ಸ್ಥಳದಲ್ಲೇ ಕಟುವಾಗಿ ಪ್ರತಿಕ್ರಿಯಿಸಿದರು.
ಇದನ್ನೂ ಓದಿ:
“ಯಾರಾದರೂ ತಮ್ಮ ತಾಯಿಯನ್ನು ಕಳೆದುಕೊಂಡಾಗ ಹೇಗನ್ನಿಸುತ್ತದೆ ಎಂದು ಕೇಳಬೇಕಾ? ನಮ್ಮ ತಾಯಿ ಸಮಾನ ವ್ಯಕ್ತಿ ಹೋಗಿದ್ದಾರೆ. ಇಂತಹ ಸಮಯದಲ್ಲಿ ಈ ಪ್ರಶ್ನೆ ಕೇಳುವುದರಲ್ಲಿ ಅರ್ಥವೇನು?” ಎಂದು ಅವರು ಪಾಪರಾಜಿಗಳಿಗೆ ಪ್ರಶ್ನೆ ಮಾಡಿದರು. ಅವರ ಮಾತುಗಳು ಅಲ್ಲಿದ್ದವರನ್ನೇ ಕ್ಷಣಕಾಲ ಮೌನಗೊಳಿಸಿತು.
ಪಾಪರಾಜಿಗಳು “ಬಹಳ ಬೇಸರವಾಗುತ್ತದೆ” ಎಂದು ಉತ್ತರಿಸಿದಾಗ, ಜಾಕಿ ಶ್ರಾಫ್ ಶಾಂತವಾಗಿ, “ಅಷ್ಟೇ ವಿಷಯ. ಇಂತಹ ಸಂದರ್ಭಗಳಲ್ಲಿ ಗೌರವ ಇರಬೇಕು” ಎಂದು ಹೇಳಿ ಅಲ್ಲಿಂದ ತೆರಳಿದರು.



