ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಗಿನ್ನೂ ಬೇಸಿಗೆ ಆರಂಭವಾಗಿದ್ದು, ರಸ್ತೆ ಬದಿ ಕಲ್ಲಂಗಡಿ, ಮಾವು ಹಣ್ಣುಗಳು ಕಾಣಿಸುತ್ತಿವೆ. ಈಗಾಗಲೇ ರಸ್ತೆಗಿಳಿಯುವ ಜನ ಟೋಪಿ, ಛತ್ರಿ ಹಿಡಿದು ಓಡಾಡುತ್ತಿದ್ದಾರೆ. ಆದರೆ ಇದೆಲ್ಲ ಬಿಸಿಲೇ ಅಲ್ಲ, ಮುಂದಿನ ತಿಂಗಳಿನಿಂದ ಬಿಸಲ ಅನುಭವ ಚುಚ್ಚುವಂತೆ ಇರುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಕರ್ನಾಟಕದಲ್ಲಿ ಫೆಬ್ರವರಿ ತಿಂಗಳಿನಲ್ಲೇ ತಾಪಮಾನ ಹೆಚ್ಚಾಗಿದ್ದು, ಈ ನಡುವೆಯೇ, ಮಾರ್ಚ್ನಿಂದ ಮೇ ತಿಂಗಳವರೆಗೆ ರಾಜ್ಯದಲ್ಲಿ ಬಿಸಿಲಿನ ಬೇಗೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
2026ರ ಮಾರ್ಚ್ನಿಂದ ಮೇ ಅವಧಿಯಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಲಿದ್ದು, ಕೇರಳ ಮತ್ತು ತಮಿಳುನಾಡು ಹೊರತುಪಡಿಸಿ ಇತರೆ ಪ್ರದೇಶಗಳಲ್ಲಿ ವಾಡಿಕೆಗಿಂತಲೂ ಬಿಸಲು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಉತ್ತರ ಒಳನಾಡು ಕರ್ನಾಟಕದ ಬಹುತೇಕ ಭಾಗಗಳಿಗೆ ಮಾರ್ಚ್–ಮೇ ಅವಧಿಯಲ್ಲಿ ಉಷ್ಣ ಅಲೆ (ಹೀಟ್ವೇವ್) ತೀವ್ರಗೊಳ್ಳುವ ಸಾಧ್ಯತೆಯಿದ್ದು, ರೆಡ್ ಅಲರ್ಟ್ ಘೋಷಿಸಿದೆ.
ಪ್ರಸ್ತುತ ಹೆಚ್ಚಾಗಿರುವ ತಾಪಮಾನವು 3 ರಿಂದ 6 ದಿನಗಳವರೆಗೆ ಮುಂದುವರಿಯುವ ಸಾಧ್ಯತೆ ಇದ್ದು, ನಂತರ ಕಡಿಮೆಯಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದೆ.



