Tuesday, November 25, 2025

WEATHER | ಮಳೆ ಕರ್ನಾಟಕದವರ ಬೆನ್ನು ಬಿಡೋ ಹಾಗೆ ಕಾಣ್ತಿಲ್ಲ: ಈ ವಾರ ಅಂತೂ ವರುಣದೇವರ ಕೃಪೆ ಇದ್ಯಂತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದಲ್ಲಿ ವಾತಾವರಣ ಮತ್ತೆ ಮಳೆಯ ಅಬ್ಬರಕ್ಕೆ ತಯಾರಾಗುತ್ತಿದೆ. ಬಂಗಾಳಕೊಲ್ಲಿಯಲ್ಲಿ ರಚನೆಯಾಗುತ್ತಿರುವ ಚಂಡಮಾರುತದ ಪರಿಣಾಮವಾಗಿ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಹಗುರದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಮಳೆ ಹೆಚ್ಚಾದಂತೆ ಮುಂದಿನ ವಾರ ರಾಜ್ಯದ ತಾಪಮಾನವೂ ಕ್ರಮೇಣ 2 ರಿಂದ 4 ಡಿಗ್ರಿ ಸೆಲ್ಸಿಯಸ್‌ವರೆಗೆ ಇಳಿಯುವ ನಿರೀಕ್ಷೆಯಿದೆ.

ಕರಾವಳಿ ಭಾಗಗಳಲ್ಲಿ ಮಳೆಯ ಜೊತೆಗೆ ಗುಡುಗು–ಮಿಂಚು ಮತ್ತು ಬಿರುಗಾಳಿಯೂ ಬೀಸುವ ಸಾಧ್ಯತೆ ಇದ್ದು, ನಿವಾಸಿಗಳು ಎಚ್ಚರಿಕೆ ಕ್ರಮಗಳನ್ನು ಪಾಲಿಸಬೇಕೆಂದು ಇಲಾಖೆ ಸೂಚಿಸಿದೆ. ಉಡುಪಿ, ದಕ್ಷಿಣ ಕನ್ನಡ, ಕೋಲಾರ ದಕ್ಷಿಣ ಒಳನಾಡು, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರದಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ.

ಇದೇ ರೀತಿ ರಾಮನಗರ, ಮಂಡ್ಯ, ಮೈಸೂರು, ಕೊಡಗು, ತುಮಕೂರು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಮುಂದಿನ ದಿನಗಳಲ್ಲಿ ಮಧ್ಯಮದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಚಂಡಮಾರುತದ ಚಲನವಲನವೇ ಈ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ನಿರೀಕ್ಷೆ ಇದ್ದು, ಬೆಳಗಿನ ಹೊತ್ತು ಮೋಡ ಕವಿದ ವಾತಾವರಣ, ಸೌಮ್ಯ ಗಾಳಿ ಮತ್ತು ತಂಪಾದ ಹವಾಮಾನ ಮುಂದುವರಿಯಲಿದೆ.

error: Content is protected !!