ಹೊಸದಿಗಂತ ಡಿಜಿಟಲ್ ಡೆಸ್ಕ್:
ಇರಾನ್ನ ಸರ್ವೋಚ್ಚ ನಾಯಕ ಖಮೇನಿ ಹತ್ಯೆಯನ್ನು ಖಂಡಿಸಿ ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದ್ದಾರೆ. “ಭಾರತದ ಅನ್ನ ಉಂಡು, ಇಲ್ಲಿನ ಗಾಳಿ ಸೇವಿಸಿ, ಯಾವುದೋ ದೇಶದ ನಾಯಕನಿಗಾಗಿ ಇಲ್ಲಿ ಕಣ್ಣೀರು ಸುರಿಸುವುದು ದೇಶದ್ರೋಹದ ಕೆಲಸ” ಎಂದು ಅವರು ಕಿಡಿಕಾರಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತಿಭಟನಾಕಾರರ ವಿರುದ್ಧ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
“ಆರ್ಎಸ್ಎಸ್ ಪಥಸಂಚಲನಕ್ಕೆ ರಿಜಿಸ್ಟ್ರೇಷನ್ ಕೇಳುವ ಪ್ರಿಯಾಂಕ್ ಖರ್ಗೆ ಅವರು, ಈಗ ರಸ್ತೆಯಲ್ಲಿ ಅಳುತ್ತಿರುವವರು ಯಾವ ದೇಶದಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಉತ್ತರಿಸಲಿ. ಇವರು ಆ ದೇಶದ ನಾಯಕರ ‘ಚೇಲಾ’ಗಳಾಗಲು ಯುಎಇ ಅಥವಾ ಇರಾನ್ನಲ್ಲಿ ಪರ್ಮಿಷನ್ ಪಡೆದಿದ್ದಾರೆಯೇ?” ಎಂದು ಪ್ರಶ್ನಿಸಿದರು.
ಪಾಕಿಸ್ತಾನ ಭಾರತದ ಮೇಲೆ ದಾಳಿ ಮಾಡಿದಾಗ ಅಥವಾ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆದಾಗ ಮೌನವಾಗಿದ್ದವರು, ಈಗ ಇರಾನ್ ನಾಯಕನಿಗಾಗಿ ಪ್ರತಿಭಟನೆ ನಡೆಸುತ್ತಿರುವುದು ಅವರ ಬಣ್ಣವನ್ನು ಬಯಲು ಮಾಡಿದೆ ಎಂದು ಕುಟುಕಿದರು.
ದೇಶದಲ್ಲಿ ಅಶಾಂತಿ ಮೂಡಿಸುವ ಇಂತಹ ಶಕ್ತಿಗಳ ಮೇಲೆ ‘ಗುಂಡಿನ ದಾಳಿ’ ನಡೆಸಬೇಕು. ಇವರೆಲ್ಲರೂ ದೇಶದ್ರೋಹಿಗಳೇ ಹೊರತು ದೇಶಪ್ರೇಮಿಗಳಲ್ಲ ಎಂದು ಯತ್ನಾಳ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.



