ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಲ್ಮಾನ್ ಖಾನ್ಗೆ (Salman Khan) ಕೆಲವು ದಿನಗಳ ಹಿಂದೆ ಜೀವ ಬೆದರಿಕೆ ಹಾಕಿದ್ದ ವ್ಯಕ್ತಿಯೊಬ್ಬನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಸಲ್ಮಾನ್ ಖಾನ್ಗೆ (Salman Khan) ಕೆಲವು ದಿನಗಳ ಹಿಂದೆಯಷ್ಟೆ ವ್ಯಕ್ತಿಯೊಬ್ಬ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಕಳಿಸಿದ್ದ. ಸಲ್ಮಾನ್ ಖಾನ್ರ ಆಪ್ತ ಹಾಗೂ ಮ್ಯಾನೇಜರ್ ಸಹ ಆಗಿರುವ ಪ್ರಶಾಂತ್ ಗುಂಜಲ್ಕರ್ಗೆ ಈ ಬೆದರಿಕೆ ಇ-ಮೇಲ್ ಬಂದಿದ್ದು, ಈ ಕುರಿತು ಪ್ರಶಾಂತ್ ಮಾರ್ಚ್ 18 ರಂದು ಮುಂಬೈ ಪೊಲೀಸರ ಬಳಿ ದೂರು ದಾಖಲಿಸಿದ್ದರು.
ಈ ಕುರಿತು ತನಿಖೆ ಆರಂಭಿಸಿದ ಪೊಲೀಸರು ರಾಜಸ್ಥಾನದ ಜೋಧಪುರದಿಂದ ಇಮೇಲ್ ಬಂದಿದ್ದು ತಿಳಿದು ರಾಜಸ್ಥಾನಕ್ಕೆ ತೆರಳಿ ಅಲ್ಲಿನ ಸ್ಥಳೀಯ ಪೊಲೀಸರ ನೆರವಿನೊಂದಿಗೆ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
21 ವರ್ಷದ ಧಕದ್ರಾಮ್ ಬಿಷ್ಣೋಯಿ ಎಂಬಾತನನ್ನು ಮುಂಬೈ ಪೊಲೀಸರುಗ ಬಂಧಿಸಿದ್ದು, ಇದೇ ವ್ಯಕ್ತಿಯೇ ಸಲ್ಮಾನ್ ಖಾನ್ ಅನ್ನು ಕೊಲ್ಲುವುದಾಗಿ ಅವರ ಮ್ಯಾನೇಜರ್ಗೆ ಇಮೇಲ್ ಕಳಿಸಿದ್ದ ಎನ್ನಲಾಗುತ್ತಿದೆ.
ಇದೇ ಆರೋಪಿಯು ಗಾಯಕ ಸಿಧು ಮೂಸೆವಾಲ ತಂದೆಗೂ ಇ-ಮೇಲ್ ಕಳಿಸಿದ್ದು ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸರು ಸಹ ಜೋಧ್ಪುರ ಪೊಲೀಸರಿಗೆ ಮಾಹಿತಿ ಹಂಚಿಕೊಂಡು ಆತನ ಬಂಧನಕ್ಕೆ ಯತ್ನಿಸಿದ್ದರು ಎಂದು ಜೋಧ್ಪುರದ ಲೂನಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಾಹಿತಿ ನೀಡಿದ್ದಾರೆ.
ಬಂಧಿತನಾಗಿರುವ ಧಕದ್ರಾಮ್ ಬಿಷ್ಣೋಯಿ ಬಳಿ ಶಸ್ತ್ರಾಸ್ತ್ರಗಳು ಸಹ ಪತ್ತೆಯಾಗಿದ್ದು, ಕೊಲೆ ಬೆದರಿಕೆ ಜೊತೆಗೆ ಅಕ್ರಮ ಶಸ್ತ್ರಾಸ್ತ್ರ ಪ್ರಕರಣವನ್ನು ಸಹ ಆತನ ಮೇಲೆ ದಾಖಲಿಸಲಾಗಿದೆ.