ಹೊಸದಿಗಂತ ಡಿಜಿಟಲ್ ಡೆಸ್ಕ್
ಪ್ರವಾದಿ ಮಹಮದ್ ರ ಕುರಿತಾಗಿ ವಿವಾದಾತ್ಮಕ ಮಾತುಗಳನ್ನಾಡಿದ ಆರೋಪ ಹೊರಿಸಿ ಕಟ್ಟರ್ ಇಸ್ಲಾಮಿಕ್ ವಾದಿಗಳು ಕೊಲೆ, ಅತ್ಯಾಚಾರ ಬೆದರಿಕೆಗಳನ್ನು ಒಡ್ಡುತ್ತಿದ್ದಾರೆ ಎಂದು ಬಿಜೆಪಿ ವಕ್ತಾರೆ ನೂಪುರ್ ಶರ್ಮ ಕಳವಳ ವ್ಯಕ್ತಪಡಿಸಿದ ಬೆನ್ನಲ್ಲೇ, ಇದೀಗ ಶರ್ಮಾರಿಗೆ ಗಡಿಯಾಚೆಗಿನ ಉಗ್ರ ಸಂಘಟನೆಗಳಿಂದಲೂ ಪ್ರಾಣ ಬೆದರಿಕೆಗಳು ಬರಲಾರಂಭಿಸಿವೆ.
ನೂಪುರ್ ಶರ್ಮಾರ ಶಿರಚ್ಛೇದ ಮಾಡುವವರಿಗೆ ಪಾಕಿಸ್ತಾನಿ ರೂ ಗಳಲ್ಲಿ 5 ಮಿಲಿಯನ್ (ಸುಮಾರು 50 ಲಕ್ಷ
ಲಕ್ಷ) ನೀಡುವುದಾಗಿ ‘ಲಬ್ಬೈಕಿಯನ್ಸ್ ಟಿವಿ’ ಎಂಬ ಹೆಸರಿನ ಪಾಕಿಸ್ತಾನಿ ಟ್ವಿಟರ್ ಹ್ಯಾಂಡಲ್ ಘೋಷಿಸಿದೆ. ಈ ಟ್ವಿಟರ್ ಹ್ಯಾಂಡಲ್ ಅನ್ನು ಪಾಕ್ ನ ಇಸ್ಲಾಮಿಕ್ ಉಗ್ರವಾದಿ ಪಕ್ಷವಾದ ‘ತೆಹ್ರೀಕ್-ಎ-ಲಬ್ಬೈಕ್ ಪಾಕಿಸ್ತಾನ್ (ಟಿಎಲ್ಪಿ) ಬೆಂಬಲಿಗರು ನಡೆಸುತ್ತಿದ್ದಾರೆ.
ಪಾಕಿಸ್ತಾನಿಗಳು ಬಿಜೆಪಿ ವಕ್ತಾರೆ ನೂಪುರ್ ಸಾವನ್ನು ಬಯಸುತ್ತಿದ್ದಾರೆ. ಆದರೆ ಆಕೆ ಗಡಿಯ ಇನ್ನೊಂದು ಬದಿಯಲ್ಲಿರುವುದರಿಂದ ಹತ್ಯೆ ಮಾಡಲು ಸಾಧ್ಯವಿಲ್ಲದಂತಾಗಿದೆ ಎಂದು ದುಃಖಿಸುತ್ತಿದ್ದಾರೆ. ನಾನು ಭಾರತದಲ್ಲಿ ಇದ್ದದೇ ಆದರೆ ಅವಳನ್ನು ದೈರ್ಯವಾಗಿ ಕೊಲ್ಲುತ್ತಿದ್ದೆ ಎಂದು ಟ್ವಿಟರ್ ಬಳಕೆದಾರನೊಬ್ಬ ಲಬ್ಬೈಕಿಯನ್ಸ್ ಟಿವಿ ಟ್ವಿಟ್ ನಲ್ಲಿ ಬೆದರಿಕೆಯೊಡ್ಡಿದ್ದಾನೆ.
ದೇಶದೊಳಗೂ ಬೆದರಿಕೆ:
ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಧರ್ಮನಿಂದೆ ಆರೋಪದ ಮೇಲೆ ಕೊಂದ ಯಾವುದೇ ಮುಸ್ಲಿಮರಿಗೆ 1 ಕೋಟಿ ರೂ ನೀಡುವುದಾಗಿ ಹೈದರಾಬಾದ್ ಮೂಲದ ಮತಾಂಧ ಸ್ಥಳೀಯ ಪಕ್ಷ ಎಐಎಮ್ಐಎಮ್ (ಇಂಕ್ವಿಲಾಬ್) ಹೇಳಿದೆ.
ಪಕ್ಷದ ಮುಖಂಡ ಕಾವಿ ಅಬ್ಬಾಸಿ ಎಂಬಾತ ಈ ಬೆದರಿಕೆ ಹಾಕಿದ್ದಾನೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಅಬ್ಬಾಸಿ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾನೆ. ನಿಮಗೆ ತಿಳಿದಿರುವಂತೆ, ಪ್ರವಾದಿ ಮುಹಮ್ಮದ್ ಅವರನ್ನು ಅವಮಾನಿಸುವವರಿಗೆ ಇಸ್ಲಾಂನಲ್ಲಿ ನೀಡುವ ಶಿಕ್ಷೆ ಮರಣ. ಯಾರೇ ಧರ್ಮನಿಂದನೆ ಎಸಗಿದರೂ, ಆತನನ್ನು/ಅವಳನ್ನು ಕೊಂದವರಿಗೆ ₹1 ಕೋಟಿ ಬಹುಮಾನ ಘೋಷಿಸುತ್ತೇವೆ. ನಾವು ಈ ಹಿಂದೆ ವಸೀಂ ರಿಜ್ವಿಗೆ ಇದೇ ರೀತಿಯ ಘೋಷಣೆ ಮಾಡಿದ್ದೆವು ಎಂದು ಹೇಳಿಕೊಂಡಿದ್ದಾನೆ.
ಏನಿದು ವಿವಾದ?
ಶುಕ್ರವಾರ (ಮೇ 27) ಟೈಮ್ಸ್ ನೌ ಚಾನೆಲ್ನಲ್ಲಿ ಚರ್ಚೆಯಲ್ಲಿ ಪಾಲ್ಗೊಂಡಿದ್ದ ನೂಪುರ್ ಶರ್ಮಾ ಆ ಬಳಿಕ ಇಸ್ಲಾಮಿಕ್ವಾದಿಗಳಿಂದ ದ್ವೇಷಪೂರಿತ ಮಾತುಗಳು ಮತ್ತು ಕೊಲೆ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ. ಜ್ಞಾನವಾಪಿ ವಿಚಾರವಾಗಿ ನಡೆಸಲಾಗುತ್ತಿದ್ದ ಚರ್ಚೆಯ ಸಂದರ್ಭದಲ್ಲಿ, ದೇಶದಲ್ಲಿ ʼಹಿಂದೂ ಧರ್ಮದ ವಿರುದ್ಧ ಆಕ್ಷೇಪಾರ್ಹ ಟೀಕೆಗಳನ್ನು ಮಾಡಬಹುದಾದರೆ, ಇದಕ್ಕೆ ಪ್ರತಿಕ್ರಿಯೆಯಾಗಿ ಇಸ್ಲಾಮಿಕ್ ನಂಬಿಕೆಗಳನ್ನೂ ನಾವು ಅಪಹಾಸ್ಯ ಮಾಡಬಹುದಲ್ಲವೇ ಎಂದು ಪ್ರಶ್ನಿಸಿದ್ದರು. ಈ ಚರ್ಚೆಯ ವಿಡಿಯೋವನ್ನು ಆಲ್ಟ್ ನ್ಯೂಸ್ ನ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್ ಎಡಿಟ್ ಮಾಡಿ ಟ್ವೀಟ್ ಮಾಡಿದ್ದಾರೆ. ಆ ಬಳಿಕ ನನಗೆ ಶಿರಚ್ಛೇದ ಸೇರಿದಂತೆ ಕೊಲೆ ಮತ್ತು ಅತ್ಯಾಚಾರ ಬೆದರಿಕೆಗಳು ಬರುತ್ತಿವೆ. ನನಗೆ ಅಥವಾ ನನ್ನ ಕುಟುಂಬಕ್ಕೆ ಏನಾದರೂ ಆದರೆ ಜುಬೈರ್ ಹೊಣೆಯಾಗುತ್ತಾರೆ” ಎಂದು ನೂಪುರ್ ಶರ್ಮಾ ಆರೋಪಿಸಿದ್ದಾರೆ.