ಹೊಸದಿಗಂತ ವರದಿ ಬೆಂಗಳೂರು:
ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದ ಪರಿಣಾಮ ಮೂರು ವರ್ಷದ ಹೆಣ್ಣು ಮಗು ಸಾವನ್ನಪ್ಪಿರುವ ಘಟನೆ ನಿನ್ನೆ (ಮಾರ್ಚ್ 22) ಬೆಂಗಳೂರಿನ ರಾತ್ರಿ ಪುಲಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜೀವನಹಳ್ಳಿಯಲ್ಲಿ ನಡೆದಿದೆ.
ಕಮ್ಮನಹಳ್ಳಿ ಬಳಿಯ ಕುಳ್ಳಪ್ಪ ಸರ್ಕಲ್ ನಿವಾಸಿಗಳಾದ ಶಕ್ತಿ ಮತ್ತು ಸತ್ಯ ದಂಪತಿಯ 3ವರ್ಷದ ಮಗು ರಕ್ಷಾ ಪ್ರಾಣಕಳೆದುಕೊಂಡ ಬಾಲಕಿ.
ರಕ್ಷಾ ತನ್ನ ತಂದೆ ಜೊತೆಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಗಾಳಿ ಮಳೆಗೆ ರಸ್ತೆ ಬದಿಯ ಹೊಂಗೆ ಮರ ಬೈಕ್ ನಲ್ಲಿ ಮುಂಭಾಗದಲ್ಲಿ ಕುಳಿತ್ತಿದ್ದ ರಕ್ಷಾ ತಲೆ ಮೇಲೆಯೇ ಬಿದ್ದು ತೀವ್ರ ರಕ್ತಸ್ರಾವವಾಗಿ ಕೊನೆಯುಸಿರೆಳೆದಿದ್ದಾಳೆ.
ತಂದೆ ಜೊತೆಗೆ ಮಾವ ಮುರುಳಿ ಮನೆಗೆ ಬೈಕ್ ನಲ್ಲಿ ಬಂದಿದ್ದ ಮಗು ವಾಪಸ್ ಮನೆಗೆ ಹೋಗುವಾಗ ಈ ಘಟನೆ ನಡೆದಿದೆ. ರಕ್ಷಾಳನ್ನು ಮೊದಲು ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಬಳಿಕ ಬೌರಿಂಗ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಚಿಕಿತ್ಸೆ ಫಲಿಸದೆ ಮಗು ಮೃತಪಟ್ಟಿದೆ.
ಮಗುವನ್ನ ಕಳೆದು ಕೊಂಡ ತಂದೆ ತಾಯಿಯ ಆಕ್ರಂದನ ಮುಗಿಲು ಮುಟ್ಡಿದೆ. ಇನ್ನು ಆಸ್ಪತ್ರೆಗೆ ಬಿಬಿಎಂಪಿ ಪೂರ್ವವಲಯದ ಜಂಟಿ ಆಯುಕ್ತೆ ಸರೋಜಾದೇವಿ, ಬಿಬಿಎಂಪಿ ಅರಣ್ಯ ಘಟಕದ ಮುಖ್ಯಸ್ಥರಾರ ಸ್ವಾಮಿ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವಾನ ಹೇಳಿದರು. ಈ ಬಗ್ಗೆ ಪುಲಕೇಶಿ ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ದಾಖಲಾಗಿದೆ.