ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕೆಎಸ್ಆರ್ಟಿಸಿ ಬಸ್ ನಲ್ಲಿ ಟಿಕೆಟ್ ರಹಿತ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ದಂಡದ ಬಿಸಿ ಮುಟ್ಟಿದ್ದು, ಮಾರ್ಚ್ ತಿಂಗಳಲ್ಲಿ ಬರೋಬ್ಬರಿ 8 ಲಕ್ಷಕ್ಕೂ ಅಧಿಕ ದಂಡ ವಸೂಲಿ ಮಾಡಲಾಗಿದೆ.
ನಿಗಮದ ವಿಶೇಷ ತನಿಖಾ ತಂಡಗಳು ರಾಜ್ಯಾದ್ಯಂತ ಸಂಚರಿಸುವ ಸುಮಾರು 42,395 ಬಸ್ ಗಳನ್ನು ತಪಾಸಣೆಗೊಳಪಡಿಸಿವೆ. ಈ ವೇಳೆ ಒಟ್ಟು 4,260 ಪ್ರಕರಣಗಳನ್ನು ಪತ್ತೆಹಚ್ಚಲಾಗಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ಈ ವೇಳೆ 4,265 ಟಿಕೆಟ್ ರಹಿತ ಪ್ರಯಾಣಿಕರಿಂದ ಒಟ್ಟು 8,16,375 ರೂ. ಗಳನ್ನು ದಂಡದ ರೂಪದಲ್ಲಿ ವಸೂಲಿ ಮಾಡಿದೆ. ಈ ಮೂಲಕ ನಿಗಮದ ಆದಾಯದಲ್ಲಿನ ಸೋರಿಕೆಯನ್ನು ಪತ್ತೆಹಚ್ಚಿದ್ದಾರೆ.
ಇದೇ ವೇಳೆ ಕರ್ತವ್ಯ ಲೋಪ ಎಸಗಿದ ಮತ್ತು ಆದಾಯ ಸೋರಿಕೆಗೆ ಕಾರಣರಾದ ಸಂಬಂಧಪಟ್ಟ ಸಿಬ್ಬಂದಿಗಳ ವಿರುದ್ಧವೂ ಶಿಸ್ತಿನ ಕ್ರಮಗಳನ್ನು ಕೈಗೊಂಡಿದೆ.
ಪ್ರಯಾಣಿಕರು ಬಸ್ಸಿನಲ್ಲಿ ಪ್ರಯಾಣಿಸುವ ವೇಳೆ ಕಡ್ಡಾಯವಾಗಿ ಟಿಕೆಟ್ ಅಥವಾ ಪಾಸ್ಗಳನ್ನು ಪಡೆದು ಪ್ರಯಾಣಿಸಬೇಕು. ಟಿಕೆಟ್ ರಹಿತ ಪ್ರಯಾಣ ಅಪರಾಧವಾಗಿದೆ ಎಂದು ಕೆಎಸ್ಆರ್ಟಿಸಿ ಮನವಿ ಮಾಡಿದೆ.



