ಹೊಸದಿಗಂತ ವರದಿ, ಮಂಗಳೂರು:
ತಲಪಾಡಿಯಿಂದ-ಮಂಗಳೂರು ನಡುವೆ ಚಲಿಸುವ ಪದ್ಮ ಟ್ರಾವೆಲ್ಸ್ ಖಾಸಗಿ ನಗರ ಸಾರಿಗೆ ಬಸ್ಸು ಮತ್ತು ಹೊಸಂಗಡಿ ಜಂಕ್ಷನ್ ನಿಂದ ಮಂಗಳೂರು ನಡುವೆ ಸಂಚರಿಸುವ ಅಸರ್ ಟ್ರಾವೆಲ್ಸ್ ಖಾಸಗಿ ಸರ್ವಿಸ್ ಬಸ್ ನಿರ್ವಾಕರ ನಡುವೆ ಹೊಯ್ ಕೈ ನಡೆದಿದ್ದು,ಈ ಬೀದಿ ಕಾಳಗದ ವೀಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬುಧವಾರ ಸಾಯಂಕಾಲ 3.40 ರ ವೇಳೆ ತೊಕ್ಕೊಟ್ಟು ಸಮೀಪದ ಓವರ್ ಬ್ರಿಡ್ಜ್ ರೈಲ್ವೇ ಮೇಲ್ಸೇತುವೆ ಬಳಿಯ ಬಸ್ಸು ತಂಗುದಾಣದಲ್ಲಿ ಈ ಘಟನೆ ನಡೆದಿದೆ.
ತಲಪಾಡಿಯಿಂದ ಮಂಗಳೂರಿಗೆ ಧಾವಿಸುತ್ತಿದ್ದ ಅಸರ್ ಟ್ರಾವೆಲ್ಸ್ ಬಸ್ಸನ್ನು ಬೆನ್ನಟ್ಟಿದ ಪದ್ಮ ಟ್ರಾವೆಲ್ಸ್ ಬಸ್ಸು ಚಾಲಕನು ಓವರ್ ಬ್ರಿಡ್ಜ್ ಬಸ್ಸು ನಿಲ್ದಾಣದಲ್ಲಿ ಬಸ್ಸನ್ನು ಅಸರ್ ಟ್ರಾವೆಲ್ಸ್ ಗೆ ಅಡ್ಡಲಾಗಿ ಇಟ್ಟಿದ್ದಾನೆ.ಈ ವೇಳೆ ಎರಡು ಬಸ್ಸು ನಿರ್ವಾಕರ ನಡುವೆ ಮಾತಿನ ಚಕಮಕಿ ನಡೆದು ಹೊಯ್ ಕೈಯಾಗಿ ಬೀದಿ ಕಾಳಗವೇ ಆಗಿದೆ.
ಓವರ್ ಬ್ರಿಡ್ಜ್ ಆಟೋ ರಿಕ್ಷಾ ಪಾರ್ಕಿನ ರಿಕ್ಷಾ ಚಾಲಕರಾದ ಆನಂದ್ ಮತ್ತು ದೀಪಕ್ ಅವರು ಮಧ್ಯ ಪ್ರವೇಶಿಸಿ ಗಲಾಟೆ ನಿಲ್ಲಿಸಿದ್ದು ಬಸ್ಸು ನಿರ್ವಾಹಕರನ್ನ ಸಮಾಧಾನಗೊಳಿಸಿ ಕಳಿಸಿದ್ದಾರೆ.ಕಂಡಕ್ಟರ್ ಗಳು ಬೀದಿಯಲ್ಲಿ ಕಾದಾಡುತ್ತಿರುವ ದೃಶ್ಯವನ್ನು ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿನ ಸಹ ಪ್ರಯಾಣಿಕರೊಬ್ಬರು ಮೊಬೈಲಿನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದಾರೆ.
ಘಟನೆಯ ಕುರಿತಾಗಿ ಯಾವುದೇ ಪೊಲೀಸ್ ದೂರುಗಳು ದಾಖಲಾಗಿಲ್ಲ.
ಖಾಸಗಿ ಬಸ್ಸು ಚಾಲಕರ ಟೈಮಿಂಗ್ಸ್ ನಿಂದಾಗಿ ಗಲಾಟೆ,ಅಪಘಾತಗಳಾಗುತ್ತಿದ್ದು ಬಸ್ಸು ಪ್ರಯಾಣಿಕರು ಮತ್ತು ಸಾರ್ವಜನಿಕರು ಇದರಿಂದ ನಿತ್ಯ ಕಿರಿ ಕಿರಿ,ಸಮಸ್ಯೆ ಅನುಭವಿಸುವಂತಾಗಿದೆ.ಇಂದು ಬೀದಿಯಲ್ಲಿ ಗಲಾಟೆ ನಡೆಸಿದ ಕಂಡಕ್ಟರ್ ಗಳು ಅದೇ ವೈಷಮ್ಯದಲ್ಲಿ ನಾಳೆ ತಲ್ವಾರು ,ಮಚ್ಚು ಹಿಡಿದು ಕಾಳಗ ನಡೆಸಲೂ ಹೇಸಲಾರರು.ಮಂಗಳೂರು ಪೊಲೀಸ್ ಆಯುಕ್ತರು ಇಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.