ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೃಷ್ಣರಾಜ ಸಾಗರ ಜಲಾಶಯಕ್ಕೆ ಟಿಪ್ಪುಸುಲ್ತಾನ್ ಮೊದಲ ಅಡಿಗಲ್ಲು ಹಾಕಿದ್ದರು ಎಂಬುದಕ್ಕೆ KRS ನಲ್ಲಿರುವ ಅಡಿಗಲ್ಲು ಸಾಕ್ಷಿಯಾಗಿದೆ ಎಂದು ಸಚಿವ ಮಹದೇವಪ್ಪ ಅವರು ಹೇಳಿದ್ದು, ಈ ಮೂಲಕ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ತಮ್ಮ ಹೇಳಿಕೆ ಕುರಿತು ಬಿಜೆಪಿಯ ಸಿಟಿ ರವಿ ಸೇರಿದಂತೆ ಹಲವು ನಾಯಕರು ವಾಗ್ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿ, ಮಹದೇವಪ್ಪ ಅವರು ತಿರುಗೇಟು ನೀಡುತ್ತಿದ್ದಾರೆ.
KRS ನಲ್ಲಿರುವ ಅಡಿಗಲ್ಲಿನ ಫೋಟೋವನ್ನು ಪೋಸ್ಟ್ ಮಾಡಿರುವ ಮಹದೇವಪ್ಪ ಅವರು, ಹಜರತ್ ಟಿಪ್ಪು ಸುಲ್ತಾನ್ ಅವರಿಗೆ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟನ್ನು ಕಟ್ಟುವ ಆಲೋಚನೆ ಇತ್ತು ಮತ್ತು ಅದಕ್ಕಾಗಿ ಆತ ಕೆಲಸ ಮಾಡಿದ್ದ ಎಂಬುದಕ್ಕೆ ಈಗಲೂ ನಮ್ಮ KRS ನಲ್ಲಿ ಅಡಿಗಲ್ಲು ಸಾಕ್ಷಿಯಾಗಿದೆ. ದಯಮಾಡಿ ನಮ್ಮ ಬಂಧುಗಳು ಅದನ್ನು ಗಮನಿಸಬೇಕೆಂದು ಹೇಳಿದ್ದಾರೆ.
ಇದೇ ವೇಳೆ ಸಿಟಿ ರವಿ ವಿರುದ್ಧ ಕಿಡಿಕಾರಿರುವ ಅವರು, ಸಿಟಿ ರವಿ ಅವರೇ ಈ ವಿವರಣೆಯು ಈಗಲೂ KRS ನಲ್ಲೇ ಇದೆ. ಸುಮ್ಮನೇ ಧರ್ಮದ ಕಾರಣಕ್ಕಾಗಿ ರಾಜಕೀಯ ಮಾಡುವ ಬದಲು ಕನ್ನಡವನ್ನು ಓದುವುದನ್ನು ಕಲಿಯಿರಿ ಮತ್ತು ಪದಗಳನ್ನು ಅರ್ಥ ಮಾಡಿಕೊಳ್ಳುವುದನ್ನು ಕಲಿಯಿರಿ ಎಂದು ತಿರುಗೇಟು ನೀಡಿದ್ದಾರೆ.
ಇದಕ್ಕೂ ಮುನ್ನ ಮಹದೇವಪ್ಪ ವಿರುದ್ಧ ಸಿಟಿ ರವಿ ಅವರು ತೀವ್ರವಾಗಿ ಕಿಡಿಕಾರಿದ್ದರು. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಅವರು, ಇಂದು “KRS ಗೆ ಅಡಿಗಲ್ಲು ಹಾಕಿದ್ದು ಟಿಪ್ಪು” ಎಂದ ಕಾಂಗ್ರೆಸ್ಸಿಗಳು…ಇನ್ನೊಂದು ಸ್ವಲ್ಪ ದಿನ ಹೋದರೆ “ನಾಡಗೀತೆಯನ್ನು ಟಿಪ್ಪುವಿನ ಅಪ್ಪ ಹೈದರಾಲಿ ಬರೆದಿದ್ದು” ಎಂದು ಹೇಳಿದರೂ ಆಶ್ಚರ್ಯವಿಲ್ಲ. ಡೆಲ್ಲಿಯಿಂದ ಹಳ್ಳಿಯವರೆಗೆ ಕಾಂಗ್ರೆಸ್ಸಿನ ನಾಯಕರಿಗೆ ಹುಚ್ಚು ನಾಯಿ ಕಡಿದಿರಬೇಕು ಎಂದು ವಾಗ್ದಾಳಿ ನಡೆಸಿದ್ದರು.