ಹೊಸದಿಗಂತ ಚಿಕ್ಕಮಗಳೂರು:
ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಿ ಬಸ್ಸೊಂದು ಉರುಳಿ ಬಿದ್ದ ಪರಿಣಾಮ ಮೂರು ಮಂದಿ ಗಾಯಗೊಂಡ ಘಟನೆ ಕೊಪ್ಪ ತಾಲ್ಲೂಕು ಸೀಗೋಡು ಬಳಿ ಇಂದು ಮುಂಜಾನೆ ಸಂಭವಿಸಿದೆ.
ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 17 ಮಂದಿ ಸ್ನೇಹಿತರು ಕೊಪ್ಪ ಮೂಲಕ ಆಗುಂಬೆ ಕಡೆಗೆ ಪ್ರವಾಸ ಹೊರಟಿದ್ದರು. ಘಾಟಿ ರಸ್ತೆಯಲ್ಲಿ ಒಂದು ಕ್ಷಣ ಚಾಲಕನಿಗೆ ನಿದ್ದೆ ಮಂಪರು ಆವರಿಸಿದ ಪರಿಣಾಮ ಬಸ್ಸು ನಿಯಂತ್ರಣ ತಪ್ಪಿ ರಸ್ತೆ ಬದಿ ಕಂದಕಕ್ಕೆ ಉರುಳಿಬಿದ್ದಿದೆ.
ಘಟನೆಯಲ್ಲಿ ಕಾರ್ತಿಕ್, ಮಧು ಹಾಗೂ ಚೈತ್ರ ಎಂಬ ಮೂವರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅಪಘಾತ ಸಂಭವಿಸಿದ ಸ್ಥಳಕ್ಕೆ ಬಾಳೆಹೊನ್ನೂರು ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.