ಹೊಸದಿಗಂತ ವರದಿ, ಕುಶಾಲನಗರ:
ಬೀಟೆ ನಾಟಾಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣ ಪತ್ತೆ ಹಚ್ಚಿದ ಅರಣ್ಯ ಇಲಾಖೆ ಓರ್ವ ಆರೋಪಿಯನ್ನು ವಾಹನ ಹಾಗೂ ಮಾಲು ಸಹಿತ ವಶಕ್ಕೆ ಪಡೆದಿದೆ.
ಚಿಕ್ಕತ್ತೂರು ಗ್ರಾಮದ ಸಿ.ಎಂ.ಮೊನೇಶ್ ಬಂಧಿತ ಆರೋಪಿ.
ಖಚಿತ ಮಾಹಿತಿ ಮೇರೆಗೆ ಮಂಗಳವಾರ ರಾತ್ರಿ ಕಾರ್ಯಾಚರಣೆ ನಡೆಸಿದ ಇಲಾಖೆಯವರು ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿ ತಪಾಸಣೆ ಕೈಗೊಂಡ ಸಂದರ್ಭ ಹಾರಂಗಿ-ಚಿಕ್ಕತ್ತೂರು ಕಡೆಯಿಂದ ಬಂದ ಟ್ರ್ಯಾಕ್ಟರ್ ವೇಗವಾಗಿ ನಿಲ್ಲಿಸದೇ ಹೋಗಿದ್ದು, ಇಲಾಖಾ ವಾಹನದಲ್ಲಿ ಅದನ್ನು ಬೆನ್ನಟ್ಟಿ ಅದರಲ್ಲಿದ್ದ ಒಬ್ಬಾತನನ್ನು ವಶಕ್ಕೆ ಪಡೆಯಲಾಯಿತು.
ಉಳಿದ ಮೂರು ಜನ ಕತ್ತಲಲ್ಲಿ ಪರಾರಿಯಾಗಿದ್ದಾರೆ. ಆ.ವ್ಯಕ್ತಿಯನ್ನು ವಿಚಾರಸಲಾಗಿ ಅತ್ತೂರು ಮೀಸಲು ಅರಣ್ಯದಿಂದ ಒಂದು ಬೀಟೆ ಮರವನ್ನು ತುಂಡು ಮಾಡಿ ಟ್ರ್ಯಾಕ್ಟರ್ ಗೆ ತುಂಬಿಸಿ ಕುಶಾಲನಗರ ಕಡೆಗೆ ತರುತ್ತಿರುವುದಾಗಿ ತಿಳಿಸಿದ್ದಾನಡ.
ಚಿಕ್ಕತ್ತೂರಿನ ದಿಲೀಪ್, ಗಿರೀಶ್ ಶ್ರೀನಿವಾಸ್ ಅಲಿಯಾಸ್ ಸೀನಿ ತಲೆ ಮರೆಸಿಕೊಂಡವರೆನ್ನಲಾಗಿದೆ.
ಟ್ರ್ಯಾಕ್ಟರ್ ( KA-55 1-8510) ಮತ್ತು ಅದರಲ್ಲಿದ್ದ 9 ಬೀಟೆ ನಾಟಾಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಕಾರ್ಯಾಚರಣೆಯಲ್ಲಿ ಡಿ.ಎಫ್.ಓ. ಪೂವಯ್ಯ, ಆರ್.ಎಫ್.ಓ.ಗೋಪಾಲ್, ಕುಶಾಲನಗರ ವಲಯ ಅರಣ್ಯ ಅಧಿಕಾರಿ ಶಿವರಾಮ, ಉಪ ವಲಯ ಅರಣ್ಯ ಅಧಿಕಾರಿ ಅಂತೋಣಿ ಡಿಸೋಜ, ಅರಣ್ಯ ರಕ್ಷಕ ಮಂಜೇಗೌಡ, ದಿನೇಶ್ ಮತ್ತು ಸಿಬ್ಬಂದಿ ವರ್ಗದವರು ಇದ್ದರು.