ಮೈಸೂರಲ್ಲಿ ಒಂದೇ ಕುಟುಂಬದ ನಾಲ್ವರ ದುರಂತ: ತಂದೆಯಿಂದಲೇ ವಿಷ ಉಣಿಸಿ ಹತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೈಸೂರಿನ ವಿಶ್ವೇಶ್ವರಯ್ಯ ನಗರದ ಸಂಕಲ್ಪ್ ಅಪಾರ್ಟ್‌ಮೆಂಟ್‌ನಲ್ಲಿ ಬೆಚ್ಚಿ ಬೀಳಿಸುವ ಭಯಾನಕ ಘಟನೆಯೊಂದು ಬೆಳಕಿಗೆ ಬಂದಿದೆ. ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದು, ತಾಯಿ, ಪತ್ನಿ ಹಾಗೂ ಮಗನನ್ನು ಮನೆ ಮಾಲೀಕನೇ ಕೊಲೆ ಮಾಡಿ ತಾನು ಸಾವಿಗೆ ಶರಣಾಗಿದ್ದಾನೆ .

ಮೃತ ಚೇತನ್‌ ಅಮೆರಿಕದಲ್ಲಿರುವ ತನ್ನ ಸಹೋದರ ಭರತ್‌ಗೆ ಮುಂಜಾನೆ 4 ಗಂಟೆಗೆ ಕರೆ ಮಾಡಿ ಕುಟುಂಬದ ಮೂವರನ್ನು ಕೊಲೆ ಮಾಡಿದ್ದೇನೆ. ನಾನು ಸಾಯುತ್ತೇನೆ ಎಂದು ಹೇಳಿ ಕರೆ ಕಟ್‌ ಮಾಡಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

ಚೇತನ್‌ ಮೊದಲು ಕುಟುಂಬಸ್ಥರಿಗೆ ವಿಷ ಉಣಿಸಿ ಹತ್ಯೆಗೆ ಯೋಚಿಸಿದ್ದರು. ಅದರಂತೆ ವಿಷ ಉಣಿಸಿದ್ದರು. ವಿಷ ಉಣಿಸಿ ಸಾವನ್ನಪ್ಪದೇ ಇದ್ದಾಗ ಮೂವರನ್ನು ದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿ, ನೇಣಿಗೆ ಶರಣಾಗಿದ್ದಾರೆ.

ಮೃತನ ಸಹೋದರ ಭರತ್, ಚೇತನ್ ಪತ್ನಿಯ ತಂದೆ ತಾಯಿಗೆ ಕರೆ ಮಾಡಿ ಈ ಬಗ್ಗೆ ತಕ್ಷಣ ಮಾಹಿತಿ ನೀಡಿ, ಅಪಾರ್ಟ್‍ಮೆಂಟ್ ಬಳಿ ತೆರಳುವಂತೆ ಹೇಳಿದ್ದರು. ಅಷ್ಟರಲ್ಲಾಗಲೇ ಚೇತನ್‌ ನೇಣಿಗೆ ಶರಣಾಗಿದ್ದ.

ಅಪಾರ್ಟ್‌ಮೆಂಟ್‌ ಒಂದರಲ್ಲಿ ಚೇತನ್ (45), ರೂಪಾಲಿ (43), ಪ್ರಿಯಂವದ ಮತ್ತು ಕುಶಾಲ್ (15) ಶವ ಪತ್ತೆಯಾಗಿತ್ತು. ಚೇತನ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಹಾಗೂ ಉಳಿದವರ ಮೃತದೇಹಗಳು ಅಪಾರ್ಟ್‍ಮೆಂಟ್‍ನಲ್ಲಿ ಪತ್ತೆಯಾಗಿತ್ತು.‌ ಸಾವಿಗೂ ಮುನ್ನ ಬರೆದಿಟ್ಟಿದ್ದ ಡೆತ್‌ನೋಟ್‌ ಸಹ ಪತ್ತೆಯಾಗಿತ್ತು.

ಡೆತ್‌ನೋಟ್‌ನಲ್ಲಿ ನಮ್ಮ ಸಾವಿಗೆ ನಾವೇ ಕಾರಣ. ಹಣಕಾಸಿನ ಸಮಸ್ಯೆಯಿಂದಾಗಿ ನಾವು ಸಾಯುತ್ತಿದ್ದೇವೆ. ನಮ್ಮ ಸಾವಿಗೆ ಬೇರೆ ಯಾರು ಕಾರಣರಲ್ಲ. ನನ್ನ ಸ್ನೇಹಿತರಿಗೆ, ಸಂಬಂಧಿಕರಿಗೆ ಯಾರು ತೊಂದರೆ ಕೊಡಬೇಡಿ. ನಮ್ಮನ್ನ ಕ್ಷಮಿಸಿಬಿಡಿ, ಐ ಆಮ್ ಸಾರಿ ಎಂದು ಬರೆಯಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!