ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಟ್ರಾಪಿಕ್ ಸಮಸ್ಯೆ ಹೆಚ್ಚುತ್ತಿದ್ದು, ಇದರಿಂದ ಮಕ್ಕಳಿಗೆ ಸರಿಯಾದ ಸಮಯಕ್ಕೆ ಶಾಲೆ ತಲುಪಲು ವಾಣಿಜ್ಯ ಕೆಲಸಕ್ಕೆ ತೆರಳುವವರಿಗೂ ಕಷ್ಟವಾಗುತ್ತಿದ್ದು, ಹೀಗಾಗಿ ಸಮಯವನ್ನು ಬದಲಾವಣೆ ಮಾಡುವ ಬಗ್ಗೆ ಮರು ಪರಿಶೀಲಿಸುವಂತೆ ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್ ಸಲಹೆ ನೀಡಿದೆ.
ಬೆಂಗಳೂರಿನಲ್ಲಿ ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಹೈಕೋರ್ಟ್, ರಾಜ್ಯ ಸರ್ಕಾರವು ಮಧ್ಯಸ್ಥಗಾರರ ಸಭೆಯನ್ನು ಕರೆಯಲು ಮತ್ತು ಕೈಗಾರಿಕಾ ಘಟಕಗಳು, ಕಾರ್ಖಾನೆಗಳು, ವಾಣಿಜ್ಯ ಮನೆಗಳು ಮತ್ತು ಕಂಪನಿಗಳ ಶಾಲಾ ಸಮಯ ಮತ್ತು ಕೆಲಸದ ಸಮಯವನ್ನು ಮರುಪರಿಶೀಲಿಸುವಂತೆ ಸೂಚಿಸಿದೆ.
ಸರ್ಕಾರೇತರ ಸಂಸ್ಥೆಯಾದ (ಎನ್ಜಿಒ) ಸಮರ್ಪಣ ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರ ವಿಭಾಗೀಯ ಪೀಠವು ಈ ಸಲಹೆ ನೀಡಿದೆ.
ಸಭೆಯು ಕಾರ್ಮಿಕ ಕಾರ್ಯದರ್ಶಿಯು ಕೈಗಾರಿಕೆಗಳು, ಕಾರ್ಖಾನೆಗಳು ಅಥವಾ ಅಲೈಡ್ ಯೂನಿಟ್ಗಳು, ಕೈಗಾರಿಕಾ ಸಂಸ್ಥೆ, ಚೇಂಬರ್ ಆಫ್ ಕಾಮರ್ಸ್ನ ಪ್ರತಿನಿಧಿಗಳಂತಹ ಮಧ್ಯಸ್ಥಗಾರರ ಜೊತೆಕರೆಯಬಹುದು. ಇವುಗಳ ಕೆಲಸದ ಸಮಯವನ್ನು ಮರುಪರಿಶೀಲಿಸುವ ಬಗ್ಗೆ ಚರ್ಚಿಸಬಹುದು. ಕೈಗಾರಿಕಾ ಘಟಕಗಳು, ಕಾರ್ಖಾನೆಗಳು, ವಾಣಿಜ್ಯ ಮನೆಗಳು, ಕಂಪನಿಗಳು ಇತ್ಯಾದಿಗಳೊಂದಿಗೂ ಈ ಬಗ್ಗೆ ಚರ್ಚೆ ಮಾಡಬಹುದು. ಈ ಮೂಲಕ ಪೀಕ್ ಅವರ್ಗಳಲ್ಲಿ ಸಂಚಾರ ದಟ್ಟಣೆಯನ್ನು ತಗ್ಗಿಸುವುದಕ್ಕೆ ಅನುಕೂಲ ಆಗಲಿದೆ. ಈ ಪೀಕ್ ಅವರ್ನಲ್ಲಿ ರಸ್ತೆಗಳಲ್ಲಿ ಸಂಚರಿಸುವ ವಾಹನಗಳ ಹೊರೆಯನ್ನು ಕಡಿಮೆ ಮಾಡಲು ಮಧ್ಯಸ್ಥಗಾರರು ಕೆಲಸದ ಸಮಯದ ಆಚೀಚೆ ಮಾಡಿಕೊಳ್ಳಬಹುದೇ ಎಂಬುದರ ಸಲಹೆಯನ್ನು ಕೂಡ ನೀಡಬಹುದು ಎಂದು ಪೀಠ ಸ್ಪಷ್ಟಪಡಿಸಿದೆ.
ಇನ್ನು ಮೆಟ್ರೊ ರೈಲು ಮಾರ್ಗದ ಯೋಜನಾ ವರದಿಯನ್ನು ಸಿದ್ಧಪಡಿಸುವಂತೆ ನ್ಯಾಯಾಲಯವು ಅಧಿಕಾರಿಗಳಿಗೆ ಸೂಚಿಸಿದೆ. ಕಾಲಮಿತಿಯನ್ನು ವಿಸ್ತರಿಸಿ ಅಂದರೆ 2023-2024 ನೇ ವರ್ಷಕ್ಕೆ ಯೋಜನಾ ವರದಿಯನ್ನು ಸಿದ್ಧಪಡಿಸಬೇಕು. ಜೊತೆಗೆ ಯೋಜನಾ ವರದಿಯನ್ನು ಸಿದ್ಧಪಡಿಸುವ ಕಾರ್ಯವು ಕೂಡ ತ್ವರಿತಗೊಳಿಸಬೇಕು ಎಂದು ಪೀಠವು ಸೂಚಿಸಿದೆ.