ತುಂಗಾಭದ್ರಾನದಿ ಪ್ರವಾಹ: ಮಂತ್ರಾಲಯ ಕ್ಷೇತ್ರದಲ್ಲಿನ ವ್ಯವಸ್ಥೆಯಲ್ಲಿ ಯಾವುದೇ ಸಮಸ್ಯೆ ಇಲ್ಲ!

ಹೊಸದಿಗಂತ ವರದಿ,ರಾಯಚೂರು :

ಮಂತ್ರಾಲಯ ಶ್ರೀ ಕ್ಷೇತ್ರದಲ್ಲಿ ತುಂಗಾಭದ್ರಾನದಿ ಪ್ರವಾಹದಿಂದ ಭಕ್ತರಿಗೆ ಸ್ನಾನ, ದರ್ಶನ ಇತ್ಯಾದಿಗಳಿಗೆ ತೊಂದರೆಯಾಗದoತೆ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ತುಂಗಭದ್ರಾ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಬಿಡುಗಡೆ ಮಾಡಿದ್ದರಿಂದ ಮಂತ್ರಾಲಯದಲ್ಲಿಯೂ ಕೂಡ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದೆ. ಅಷ್ಟೇ ಹೊರತಾಗಿ ಭಕ್ತರಿಗಾಗಲಿ, ಶ್ರೀಮಠದಲ್ಲಿನ ವ್ಯವಸ್ಥೆಗಳಿಗಾಗಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ.

ಭಕ್ತರ ಅನುಕೂಲಕ್ಕಾಗಿ ನದೀ ತೀರದಲ್ಲಿ ಷವರಗಳ ಮೂಲಕ ಸ್ನಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಯಾವುದೇ ತೊಂದರೆಯಿಲ್ಲದೆ ಮಂತ್ರಾಲಯ ಯಾತ್ರೆ ಮಾಡಬಹುದು. ಇಷ್ಟೇ ಅಲ್ಲದೆ, ಮುಂಬರುವ ರಾಯರ ಆರಾಧನಾ ಸಂದರ್ಭಕ್ಕಾಗಿಯೂ ಕೂಡ ಸಕಲ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಭಕ್ತರು ಹಾಗೂ ಸಾರ್ವಜನಿಕರು ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಶ್ರೀಮಠದವರು ತಿಳಿಸಿದ್ದಾರೆ.

ನದಿಯಲ್ಲಿನ ಪ್ರವಾಹ ಕಡಿಮೆಯಾಗುತ್ತಿದ್ದು ನದಿಯಲ್ಲಿ ಸ್ನಾನಕ್ಕೂ ಕೂಡ ಅನುಮತಿಸಲಾಗುತ್ತಿದೆ. ಭಕ್ತರು ಯಾವುದೇ ಆತಂಕಕ್ಕೆ ಒಳಗಾಗದೆ ತುಂಗಾ ಸ್ನಾನ ಮಾಡಿ, ಗುರುರಾಯರ ದರ್ಶನ, ಪ್ರಸಾದ, ಶ್ರೀಪಾದಂಗಳವರಿoದ ಅನುಗ್ರಹ ಫಲಮಂತ್ರಾಕ್ಷತೆ ಪಡೆದು ಕೃತಾರ್ಥರಾಗಬೇಕೆಂದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!