ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರ್ಬಿಐ ಎರಡು ಸಾವಿರ ರೂ ಮುಖಬೆಲೆಯ ನೋಟುಗಳನ್ನು (Rs 2000 Note) ಚಲಾವಣೆಯಿಂದ ಹಿಂಪಡೆಯುವ ಘೋಷಣೆ ಮಾಡಿದ್ದು , ಇದೀಗ ಈ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.
ಮುಖ್ಯ ನ್ಯಾಯಾಧೀಶ ಸತೀಶ್ ಚಂದ್ರ ಶರ್ಮಾ, ನ್ಯಾ. ಸುಬ್ರಮಣಿಯಮ್ ಪ್ರಸಾದ್ ಅವರಿದ್ದ ಉಚ್ಚ ನ್ಯಾಯಪೀಠ ,
ರಜನೀಶ್ ಭಾಸ್ಕರ್ ಗುಪ್ತಾ ಪಿಐಎಲ್ ಅರ್ಜಿಯಲ್ಲಿ 2,000 ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ನಿರ್ಧಾರ ಆರ್ಬಿಐ ತೆಗೆದುಕೊಂಡಿದ್ದು ತಪ್ಪು. 1934ರ ಆರ್ಬಿಐ ಕಾಯ್ದೆಯ ಸೆಕ್ಷನ್ 24(2) ಕಾನೂನು ಪ್ರಕಾರ ಆರ್ಬಿಐಗೆ ಆ ಅಧಿಕಾರ ಇಲ್ಲ. ನೋಟುಗಳನ್ನು ಹಿಂಪಡೆಯುವ ತೀರ್ಮಾನವನ್ನು ಕೇಂದ್ರ ಸರ್ಕಾರ ಕೈಗೊಳ್ಳಬೇಕಿತ್ತು. ಹೀಗಾಗಿ, ನೋಟು ಹಿಂಪಡೆಯುವ ಕ್ರಮವನ್ನು ಅನೂರ್ಜಿತಗೊಳಿಸಬೇಕು ಎಂದು ವಾದಿಸಿದ್ದರು.
ಎರಡು ಸಾವಿರ ರೂ ನೋಟುಗಳನ್ನು ತಾನು ನಿಷೇಧಿಸಿಲ್ಲ, ಕೇವಲ ಚಲಾವಣೆಯಿಂದ ಮಾತ್ರ ಹಿಂಪಡೆದಿದ್ದೇವೆ. ಇದು ಕರೆನ್ಸಿ ನಿರ್ವಹಣೆ ಮತ್ತು ಆರ್ಥಿಕ ನೀತಿಯ ಒಂದು ಭಾಗವಾಗಿ ತೆಗೆದುಕೊಳ್ಳಲಾದ ಕ್ರಮವಾಗಿತ್ತು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಪ್ರತಿವಾದಿಸಿತ್ತು. ಅಂತಿಮವಾಗಿ, ದೆಹಲಿ ಹೈಕೋರ್ಟ್ ನ್ಯಾಯಪೀಠವು ಆರ್ಬಿಐ ವಾದ ಪುರಸ್ಕರಿಸಿ, ಪಿಐಎಲ್ ಅನ್ನು ವಜಾಗೊಳಿಸಲು ನಿರ್ಧರಿಸಿತ್ತು.