ಹೊಸದಿಗಂತ ವರದಿ,ಮಡಿಕೇರಿ:
ಸ್ನೇಹಿತರೊಂದಿಗೆ ಸ್ನಾನಕ್ಕೆ ತೆರಳಿದ ಇಬ್ಬರು ಯುವಕರು ಕಾವೇರಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಎಮ್ಮೆಮಾಡು ಕೂರುಳಿ ಬಳಿಯ ಕಡಿಯತ್ತೂರು ದೋಣಿ ಕಡವು ಎಂಬಲ್ಲಿ ಸೋಮವಾರ ನಡೆದಿದೆ.
ಚೇರಂಬಾಣೆ ಬಳಿಯ ಪಾಕ ಮುಕ್ಕಾಟಿ ವಿಠಲ ಎಂಬವರ ಪುತ್ರ ಅಯ್ಯಪ್ಪ (18)ಹಾಗೂ ಐವತ್ತೊಕ್ಲು ಗ್ರಾಮದ ಚಾರಂಡ ಕಾಲೋನಿ ನಿವಾಸಿ ಪುಟ್ಟ ಎಂಬವರ ಪುತ್ರ ಗಿರೀಶ್ (16) ಸಾವಿಗೀಡಾದವರು.
ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಎಮ್ಮೆಮಾಡು, ಕೂರುಳಿ ಗ್ರಾಮದಿಂದ ಕಡಿಯತ್ತೂರು, ಚೇರಂಬಾಣೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕಾವೇರಿ ನದಿಯಲ್ಲಿ ಸ್ನಾನಕ್ಕೆ ತೆರಳಿದ ಯುವಕರ ತಂಡ, ಕೂರುಳಿ ಕಡೆಯಿಂದ ಕಡಿಯತ್ತೂರು ಗ್ರಾಮಕ್ಕೆ ಜನರಿಗೆ ನದಿ ದಾಟಲು ಅಳವಡಿಸಿದ್ದ ದೋಣಿಯಲ್ಲಿ ಸಾಗುವಾಗ ದೋಣಿ ಮಗುಚಿ ಈ ದುರ್ಘಟನೆ ಸಂಭವಿಸಿರುವುದಾಗಿ ಹೇಳಲಾಗಿದೆ.
ನಾಪೋಕ್ಲು ಪೊಲೀಸರು, ಅಗ್ನಿಶಾಮಕ ಹಾಗೂ ಗೃಹರಕ್ಷಕದಳ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ನದಿ ನೀರಿನಿಂದ ಗಿರೀಶ್’ನ ಮೃತ ದೇಹವನ್ನು ಹೊರ ತೆಗೆದಿದ್ದು, ಅಯ್ಯಪ್ಪನ ಮೃತ ದೇಹಕ್ಕಾಗಿ ಶೋಧ ನಡೆಸುತ್ತಿದ್ದಾರೆ.