ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಲ್ಲಿ ನಡೆದ ವಿಪಕ್ಷಗಳ ಎರಡನೇ ಸಭೆಯ ಬೆನ್ನಲ್ಲೇ ಇಂದು ಮಾಜಿ ಸಿಎಂ ಉದ್ಧವ್ ಠಾಕ್ರೆ ಡಿಸಿಎಂ ಅಜಿತ್ ಪವಾರ್ (DCM Ajit Pawar) ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ.
ರಾಜ್ಯ ವಿಧಾನ ಪರಿಷತ್ತಿನ ಸದಸ್ಯರಾದ ಠಾಕ್ರೆ ಅವರು ಸದನದ ಕಲಾಪಕ್ಕೆ ಹಾಜರಾಗಿದ್ದರು. ಈ ವೇಳೆ, ಮಾಜಿ ಸಿಎಂ ಠಾಕ್ರೆ ಹಾಗೂ ಹಾಲಿ ಡಿಸಿಎಂ ಅಜಿತ್ ಪವಾರ್ ಮಾತುಕತೆ ನಡೆಸಿದರು. ಇದೀಗ ಈ ಭೇಟಿ ಕುತೂಹಲ ಕೆರಳಿಸಿದೆ.
ನಾನು ಅಜಿತ್ ಪವಾರ್ ಅವರನ್ನು ಭೇಟಿ ಮಾಡಿ, ಅವರಿಗೆ ಶುಭಾಶಯ ಕೋರಿದ್ದೇನೆ. ಅವರು ಜನರಿಗೆ ಒಳ್ಳೆಯ ಕೆಲಸ ಮಾಡುತ್ತಾರೆಂದು ನಾನು ಭಾವಿಸುತ್ತೇನೆ. ನಾನು ಅವರೊಂದಿಗೆ 2019ರಿಂದ ಕೆಲಸ ಮಾಡಿದ್ದೇನೆ. ಅವರ ಕೆಲಸದ ಶೈಲಿ ನನಗೆ ಗೊತ್ತು ಎಂದು ಉದ್ದವ್ ಠಾಕ್ರೆ ಹೇಳಿದ್ದರು. ಇದೊಂದು ಔಪಚಾರಿಕ ಸಭೆಯಾಗಿತ್ತು ಎಂದು ಠಾಕ್ರೆ ಹೇಳಿದ್ದಾರೆ.
ಹಣಕಾಸು ಸಚಿವರೂ ಆಗಿರುವ ಡಿಸಿಎಂ ಅಜಿತ್ ಪವಾರ್ ಅವರು ಜನರಿಗೆ ಒಳ್ಳೆಯದಾಗುವ ಕೆಲಸಗಳನ್ನು ಮಾಡಲಿ ಎಂದು ನಾನು ಆಶಿಸುತ್ತೇನೆ. ಮಹಾರಾಷ್ಟ್ರದ ಜನರಿಗೆ ಅವರಿಗೆ ನೆರವು ಸಿಗಲಿದೆ. ಯಾಕೆಂದರೆ, ಹಣಕಾಸು ಖಾತೆಯಂಥ ಪ್ರಮುಖ ಖಾತೆಗಳನ್ನು ಹೊಂದಿದ್ದಾರೆ ಎಂದು ಠಾಕ್ರೆ ಅವರು ಹೇಳಿದರು.
ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿಯಾಗಿದ್ದಾಗ ಅಜಿತ್ ಪವಾರ್ ಅವರು ಡಿಸಿಎಂ ಆಗಿ ಕೆಲಸ ಮಾಡಿದ್ದರು. ಆದರೆ, ಶಿಂಧೆ ಅವರು ಬಂಡೆದ್ದು, ಬಿಜೆಪಿಗೆ ಬೆಂಬಲ ನೀಡಿದ ಬೆನ್ನಲ್ಲೇ ಠಾಕ್ರೆ ಸರ್ಕಾರ ಪತನವಾಗಿತ್ತು.