ಹೊಸದಿಗಂತ ವರದಿ, ಚಿತ್ರದುರ್ಗ:
ಚಿತ್ರನಟ ದರ್ಶನ್ ಗ್ಯಾಂಗ್ನಿಂದ ಕೊಲೆಗೀಡಾಗಿರುವ ರೇಣುಕಾಸ್ವಾಮಿ ಅವರ ನಿವಾಸಕ್ಕೆ ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ್ ಕಾರಜೋಳ ಭಾನುವಾರ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಮಗನ ಅಗಲಿಕೆಯ ದುಃಖದಲ್ಲಿರುವ ತಂದೆ – ತಾಯಿಯನ್ನು ಭೇಟಿ ಮಾಡಿ, ಈ ಘಟನೆಯಿಂದ ಎಲ್ಲರಿಗೂ ನೋವಾಗಿದೆ. ಕರುಳ ಕುಡಿ ಕಳೆದುಕೊಂಡ ದುಃಖ ಕಳೆದುಕೊಂಡವರಿಗೆ ಮಾತ್ರ ಗೊತ್ತಾಗುತ್ತದೆ. ಮೃತ ಕುಟುಂಬಕ್ಕೆ ನ್ಯಾಯ ಒದಗಿಸಲು ನಾನು ಸಹ ಬದ್ದ. ಈ ನಿಟ್ಟಿನಲ್ಲಿ ಕುಟುಂಬದ ಧ್ವನಿಯಾಗುವೆ. ಸರ್ಕಾರ ಸಹ ನೊಂದ ಕುಟುಂಬಕ್ಕೆ ನೆರವಾಗಬೇಕು. ಅಭಯ ತುಂಬುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ನೊಂದ ಕುಟುಂಬದ ಸದಸ್ಯರಿಗೆ ಇದೇ ಸಂದರ್ಭದಲ್ಲಿ ವೈಯಕ್ತಿಕವಾಗಿ ಧನಸಹಾಯ ಮಾಡಿದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಶಶಿಧರ್ ಹಾಗೂ ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬದ್ರಿನಾಥ ಹಾಜರಿದ್ದರು.