ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶದ ಇಂದೋರ್ನಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಕುಮಾರಿ ಚಂದ್ರಕಾತ ಜೆತಾನಿ ಅವರು ಆರೋಗ್ಯ ಹದಗೆಟ್ಟಾಗ ತೆಗೆದುಕೊಂಡ ಔಷಧಿಗಳು ಏರುಪೇರಾಗಿ ಪಾರ್ಶ್ವವಾಯುಗೆ ತುತ್ತಾಗಿ ಹಾಸಿಗೆ ಹಿಡಿದಿದ್ದಾರೆ. ಓಡಾಡಲು ಸಾಧ್ಯವಿಲ್ಲ. ವ್ಹೀಲ್ಚೇರ್ ಹಾಸಿಗೆ ಹಾಗೂ ಶಾಲಾ ತರಗತಿ ಎಂದು ದಿನ ದೂಡುತ್ತಿರುವ ಶಿಕ್ಷಕಿ ಪ್ರತಿ ದಿನ ಡಯಾಲಿಸಿಸ್ ನೋವು ಸೇರಿದಂತೆ ಹಲವು ಅತೀಯಾದ ನೋವು ಅನುಭವಿಸುತ್ತಿದ್ದಾರೆ. ಈ ನೋವಿನಿಂದ ಮುಕ್ತಿ ನೀಡಲು ಇದೀಗ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಪತ್ರ ಬರೆದಿದ್ದಾರೆ. ಈ ನೋವು ಸಹಿಸಲು ಸಾಧ್ಯವಾಗುತ್ತಿಲ್ಲ. ದಿನ ದೂಡವುದರಲ್ಲಿ ಅರ್ಥವಿಲ್ಲ. ದಯಾಮರಣ ಕರುಣಿಸಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಶಿಕ್ಷಕಿ ಕುಮಾರಿ ಚಂದ್ರಕಾತ ಜೆತಾನಿ ವ್ಹೀಲ್ಚೇರ್ನಲ್ಲೇ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾರೆ. ಪ್ರತಿ ದಿನ 7 ರಿಂದ 8 ಗಂಟೆ ಪಾಠ ಮಾಡುತ್ತಾರೆ. ಆದರೆ ಹೆಜ್ಜೆ ಹೆಜ್ಜೆಗೂ ಔಷಧಿ ಸೇವಿಸಬೇಕು. ಅತೀಯಾದ ನೋವು ಸಹಿಸಲು ಸಾಧ್ಯವಾಗುತ್ತಿಲ್ಲ. ಜವಾಬ್ದಾರಿಯನ್ನು ನಿರ್ವಹಿಸಲು ಕಷ್ಟವಾಗುತ್ತಿದೆ. ಪ್ರತಿ ದಿನ ನೋವು ಅನುಭವಿಸುವ ಬದಲು ನನಗೆ ದಯಾಮರಣ ನೀಡಿ ಎಂದು ದ್ರೌಪದಿ ಮುರ್ಮುಗೆ ಪತ್ರ ಬರೆದಿದ್ದಾರೆ.
ರಾಷ್ಟ್ರಪತಿಗೆ ಪತ್ರ ಬರೆದಿರುವ ಶಿಕ್ಷಕಿ ಕುಮಾರಿ ಚಂದ್ರಕಾತ್ ಜೆತಾನಿ, ತಮ್ಮ ಆಸ್ತಿಯನ್ನು ತಾವು ಪಾಠ ಮಾಡುತ್ತಿರುವ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ದಾನ ಮಾಡಿದ್ದಾರೆ. ತಮ್ಮಲ್ಲಿರುವ ಭೂಮಿಯನ್ನು ಮಕ್ಕಳಿಗೆ ದಾನ ಮಾಡಿದ್ದಾರೆ. ಇನ್ನು ಸತ್ತ ಬಳಿಕ ತಮ್ಮ ಮೃತದೇಹವನ್ನು ಎಂಜಿಎಂ ವೈದ್ಯಕೀಯ ಕಾಲೇಜಿಗೆ ಹಸ್ತಾಂತರಿಸಲು ಮುಂದಾಗಿದ್ದಾರೆ. ಇದಕ್ಕಾಗಿ ವೈದ್ಯಕೀಯ ಕಾಲೇಜಿನ ಸ್ವಯಂಪ್ರೇರಿತ ಪತ್ರಕ್ಕೆ ಸಹಿ ಹಾಕಿದ್ದಾರೆ.
ಸರ್ಕಾರದಿಂದ ಯಾವುದೇ ನೆರವು ಸಿಗುತ್ತಿಲ್ಲ. ವಿದ್ಯಾರ್ಥಿಗಳಿಗೆ ಪಾಠ ಮಾಡಲು ಆಗುತ್ತಿಲ್ಲ. ಹೆಚ್ಚಿನ ವೈದ್ಯಕೀಯ ಚಿಕಿತ್ಸೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ದಯಾಮಾರಣ ಕರುಣಿಸಿ ಎಂದು ಶಿಕ್ಷಕಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.