ಹೊಸದಿಗಂತ ವರದಿ,ಅಂಕೋಲಾ:
ತಾಲೂಕಿನ ಸುಪ್ರಸಿದ್ಧ ಶ್ರೀ ಲಕ್ಷ್ಮೀ ನಾರಾಯಣ ಮಹಾಮಾಯಾ ದೇವಾಲಯಕ್ಕೆ ಕೇಂದ್ರ ಪ್ರವಾಸೋದ್ಯಮ ಸಚಿವ ಶ್ರೀಪಾದ ನಾಯ್ಕ ಅವರು ಭೇಟಿ ನೀಡಿ ಬಾಂಗ್ರಾ ಮಹಾಮಾಯಾ ದರ್ಶನ ಪಡೆದರು.
ಏಳು ವರ್ಷಗಳಿಗೊಮ್ಮೆ ದರ್ಶನ ಭಾಗ್ಯ ಸಿಗುವ ಬಾಂಗ್ರಾ ಮಹಾಮಾಯಾ ಉತ್ಸವದ ಕೊನೆಯ ದಿನದಂದು ದೇವಾಲಯಕ್ಕೆ ಆಗಮಿಸಿದ ಕೇಂದ್ರ ಸಚಿವರು ಶ್ರೀ ಲಕ್ಷ್ಮೀ ನಾರಾಯಣ ಮತ್ತು ಶ್ರೀಮಹಾಮಾಯಾ ದೇವರಿಗೆ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.
ತಾವು ಶ್ರೀಲಕ್ಷ್ಮೀ ನಾರಾಯಣ ಮಹಾಮಾಯಾ ದೇವಾಲಯದ ಆರಾಧಕರಾಗಿದ್ದು ಆಗಾಗ ದೇವಾಲಯಕ್ಕೆ ಭೇಟಿ ನೀಡುವ ರೂಡಿಯಿದೆ.
ದೇವಾಲಯದ ಬಾಂಗ್ರಾ ಮಹಾಮಾಯಾ ಉತ್ಸವದ ಸಂದರ್ಭದಲ್ಲಿ ಆಗಮಿಸಿ ಬಾಂಗ್ರಾ ಮಹಾಮಾಯಾ ದರ್ಶನ ಪಡೆಯುವ ಅವಕಾಶ
ತಮ್ಮ ಭಾಗ್ಯ ಎಂದು ಸಚಿವ ಶ್ರೀಪಾದ ನಾಯ್ಕ ಹೇಳಿದರು.
ಮಹಾಮಾಯಾ ದೇವಾಲಯ ಸಂಸ್ಥಾನದ ವತಿಯಿಂದ ಸಚಿವ ನಾಯ್ಕ ಅವರಿಗೆ ಶಾಲು ಹೊದೆಸಿ ಪಲ ಪುಷ್ಪ ಪ್ರಸಾದ ನೀಡಿ ಗೌರವಿಸಲಾಯಿತು.
ದೇವಾಲಯದ ಆವರಣದಲ್ಲಿ ಇರುವ ಗ್ರಾಮಪುರುಷ ಮತ್ತು ಶ್ರೀ ಭಗವತಿ ದೇವಾಲಯಗಳಿಗೆ ಭೇಟಿ ನೀಡಿದ ಸಚಿವ ಶ್ರೀಪಾದ ನಾಯ್ಕ ದೇವಾಲಯದಲ್ಲಿ ಉಪಹಾರ ಸ್ವೀಕರಿಸಿದರು.
ಬಿಜೆಪಿ ಪ್ರಮುಖ ಸಾಯಿಕಿರಣ ಶೇಟಿಯಾ, ಭಾಸ್ಕರ ನಾರ್ವೇಕರ್, ನಾಗೇಶ ಕಿಣಿ, ಪುರಸಭೆ ಅಧ್ಯಕ್ಷೆ ಶಾಂತಲಾ ನಾಡಕರ್ಣಿ, ಸದಸ್ಯೆ ಜಯಾ ನಾಯ್ಕ, ಕಾರ್ಯಕರ್ತ ಬಾಲಕೃಷ್ಣ ನಾಯ್ಕ, ನಾಗರಾಜ ನಾಯ್ಕ, ತಹಶೀಲ್ಧಾರ ಉದಯ ಕುಂಬಾರ ಮೊದಲಾದವರು ಉಪಸ್ಥಿತರಿದ್ದು ಸಚಿವರನ್ನು ಗೌರವಪೂರ್ವಕವಾಗಿ ಸ್ವಾಗತಿಸಿದರು.