ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆಯಲ್ಲಿ ‘ಆಪರೇಶನ್ ಸಿಂದೂರ್‘ ಚರ್ಚೆ ಸಮಯ ಇಂದು ಪ್ರಧಾನಿ ಮೋದಿಯವರು ಹಲವು ವಿಚಾರಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಆಪರೇಷನ್ ಸಿಂದೂರ್ ಸಮಯದಲ್ಲಿ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಕರೆ ಮಾಡಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ.
ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂದೂರ್ ಅಡಿಯಲ್ಲಿ ಪ್ರತೀಕಾರದ ದಾಳಿ ನಡೆಸಿದ ಸ್ವಲ್ಪ ಸಮಯದ ನಂತರ, ಮೇ 9 ರ ರಾತ್ರಿ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ತಮ್ಮನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಬಹಿರಂಗಪಡಿಸಿದ್ದಾರೆ. ಆದರೆ ಆ ಸಮಯದಲ್ಲಿ ಮಿಲಿಟರಿ ಅಧಿಕಾರಿಗಳೊಂದಿಗೆ ಸಭೆಯಲ್ಲಿದ್ದ ಕಾರಣ, ಸಭೆ ನಂತರ ಕರೆ ಮಾಡಿ ಮಾತನಾಡಿದ್ದಾಗಿ ಹೇಳಿಕೊಂಡಿದ್ದಾರೆ.
ಅಮೆರಿಕದ ಉಪಾಧ್ಯಕ್ಷರು ನನ್ನೊಂದಿಗೆ ಫೋನ್ನಲ್ಲಿ ಮಾತನಾಡಲು ಪ್ರಯತ್ನಿಸಿದ್ದರು. ಅವರು ಮೂರು-ನಾಲ್ಕು ಬಾರಿ ಕರೆ ಮಾಡಿದರು, ಆ ಸಮಯದಲ್ಲಿ ನಾನು ಸಭೆಯಲ್ಲಿದ್ದೆ. ನಂತರ ನಾನು ಮತ್ತೆ ಕರೆ ಮಾಡಿದೆ, ಪಾಕಿಸ್ತಾನವು ಬಹಳ ದೊಡ್ಡ ದಾಳಿಯನ್ನು ನಡೆಸಲಿದೆ ಎಂದು ಅವರು ಕರೆಯಲ್ಲಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಪ್ರಧಾನಮಂತ್ರಿ ಮೋದಿ ಅವರು, ಗುಂಡಿಗೆ ಉತ್ತರ ಗುಂಡಿನಿಂದಲೇ ನೀಡುತ್ತೇವೆ ಎಂದು ಹೇಳಿದೆ ಎಂದು ತಿಳಿಸಿದರು.
ಈ ಮೂಲಕ ಭಾರತವನ್ನು ಯಾರಿಂದಲೂ ತಡೆಯಲಾಗುವುದಿಲ್ಲ ಎಂದು ಪ್ರಧಾನಿ ಸ್ಪಷ್ಟಪಡಿಸಿದ್ದಾರೆ.