ಹೊಸದಿಗಂತ ವರದಿ, ಸೋಮವಾರಪೇಟೆ :
ಕರಾವಳಿಯ ದೈವಾರಾಧಕರಿಗೆ ಮಾಸಾಶನ ನೀಡುವ ಸರಕಾರದ ನಿರ್ಧಾರವನ್ನು ಸ್ವಾಗತಿಸಿರುವ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಪ್ರದೀಪ್ ಕಂಕಣವಾಡಿ ಹಾಗೂ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಅವರು, ವೀರಗಾಸೆ ಕಲಾವಿದರಿಗೂ ಮಾಸಾಶನ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ .
ಈ ಸಂಬಂಧ ಮುಖ್ಯಮಂತ್ರಿಗಳಿಗೆ ಮನವಿಯೊಂದನ್ನು ನೀಡಿರುವ ಅವರು, ಉತ್ತರ ಕರ್ನಾಟಕದ ವೀರಭದ್ರ (ವೀರಗಾಸೆ) ಕುಣಿತವನ್ನು ಮಾಡುವವರಿಗೂ ಕೂಡಾ ಕರಾವಳಿಯ ದೈವಾರಾಧಕರಿಗೆ ನೀಡುವ ಮಾದರಿಯಲ್ಲಿ ಮಾಸಿಕ ರೂ. ಎರಡು ಸಾವಿರ ರೂಪಾಯಿಗಳನ್ನು ನೀಡಿ ಪ್ರೋತ್ಸಾಹಿಸಬೇಕೆಂದು ಆಗ್ರಹಿಸಿದ್ದಾರೆ .
ಈ ನಾಡು ಕಂಡ ಶ್ರೇಷ್ಠ ಸಂಶೋಧಕರಾದ ಡಾ. ಜ.ಚ.ನಿ. ಯವರಿಂದ ಕನ್ನಡಿಗರ ಮೂಲಪುರುಷ ಶ್ರೀ ವೀರಭದ್ರ ಎಂದು ಹೇಳಲ್ಪಟ್ಟಿದೆ. ವೀರಭದ್ರ ದೇವರ ಪರಂಪರೆ ಸಂಸ್ಕೃತಿ ಮತ್ತು ಪ್ರಾಗೈತಿಹಾಸಿಕ ಹಿನ್ನೆಲೆಯನ್ನು ತಮ್ಮ ಒಡಪುಗಳ ಮೂಲಕ ಜನಮಾನಸದಲ್ಲಿ ಅಚ್ಚಳಿಯದೆ ಪರಿಣಾಮ ಬೀರುವ ನಿಟ್ಟಿನಲ್ಲಿ ಕಾರ್ಯತತ್ಪರರಾಗಿರುವ ಕನ್ನಡ ನಾಡಿನ ವೀರಗಾಸೆ ಕಲಾವಿದರಿಗೆ ಆದಷ್ಟು ಬೇಗ ಮಾಸಾಶನ ದೊರೆಯುವಂತೆ ಆದೇಶವನ್ನು ನೀಡಿ ಪ್ರೋತ್ಸಾಹಿಸಬೇಕೆಂದು ಅವರು ಮನವಿಯಲ್ಲಿ ವಿನಂತಿಸಿದ್ದಾರೆ .