ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ (Uttar Pradesh) ಪ್ರತಿ ಜಿಲ್ಲೆಗಳಲ್ಲಿ ಬಕ್ರೀದ್ (Bakrid )ಹಬ್ಬದಂದು ಈ ಹಿಂದೆ ಗೊತ್ತುಪಡಿಸಿದ ಸ್ಥಳಗಳಲ್ಲಿ ಮಾತ್ರ ಬಲಿ ನೀಡಬೇಕು, ನಿಷೇಧಿತ ಪ್ರಾಣಿಗಳ ಬಲಿ ನೀಡಬಾರದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಆದೇಶ ನೀಡಿದ್ದಾರೆ.
ಬಕ್ರೀದ್ ಮತ್ತು ಕನ್ವರ್ ಯಾತ್ರೆಯ ದೃಷ್ಟಿಯಿಂದ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಈದ್ನಲ್ಲಿ ಪ್ರಾರ್ಥನೆ ಸಲ್ಲಿಸುವಾಗ ವಾಹನ ಸಂಚಾರಕ್ಕೆ ತೊಂದರೆಯಾಗಬಾರದು ಎಂದು ಸೂಚನೆ ನೀಡಿದ್ದಾರೆ.
ಈ ಸಮಯ ತೀರ್ಥಯಾತ್ರೆ ಮತ್ತು ಧಾರ್ಮಿಕ ಮೆರವಣಿಗೆಗಳ ಸಮಯದಲ್ಲಿ, ಇನ್ನೊಂದು ಸಮುದಾಯದ ಭಾವನೆಗಳಿಗೆ ಧಕ್ಕೆ ತರುವಂತಹ ಯಾವುದೇ ಘಟನೆ ನಡೆಯಬಾರದು. ಯಾವುದೇ ಆಯುಧ, ಶಸ್ತ್ರಾಸ್ತ್ರಗಳ ಪ್ರದರ್ಶನವನ್ನು ಮಾಡಬಾರದು. ಜನರನ್ನು ಪ್ರಚೋದಿಸಲು ಪ್ರಯತ್ನಿಸುವ ಸಮಾಜ ವಿರೋಧಿ ಅಂಶಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇಡಬೇಕು ಎಂದು ಹೇಳಿದ್ದಾರೆ.
ಶ್ರಾವಣ ಮಾಸದಲ್ಲಿ ಸಾಂಪ್ರದಾಯಿಕ ಕನ್ವರ್ ಯಾತ್ರೆ ನಡೆಯಲಿದೆ. ಇದರಲ್ಲಿ ಸೋಮವಾರದ ಪೂಜೆಗೂ ವಿಶೇಷ ಮಹತ್ವವಿದೆ. ಇದಕ್ಕೂ ಮುನ್ನ ಜೂನ್ 29ರಂದು ಬಕ್ರೀದ್ ಆಚರಣೆ ನಡೆಯಲಿದ್ದು, ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಈ ಬಾರಿ ಸೂಕ್ಷ್ಮವಾಗಿರುವುದು ಸ್ಪಷ್ಟ. ಆದ್ದರಿಂದ ನಾವು ನಿರಂತರವಾಗಿ ಜಾಗರೂಕರಾಗಿರಬೇಕು ಎಂದು ಅವರು ಹೇಳಿದರು.
ಜುಲೈ 4 ರಿಂದ ಕನ್ವರ್ ಯಾತ್ರೆ ಆರಂಭ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪಡೆ ನಿಯೋಜಿಸಿ, ಪ್ರತಿದಿನ ಸಂಜೆ ಗಸ್ತು ತಿರುಗುವಂತೆ ಹಾಗೂ ಕಿಡಿಗೇಡಿಗಳ ವಿರುದ್ಧ ಕಟ್ಟುನಿಟ್ಟಾಗಿ ವ್ಯವಹರಿಸುವಂತೆ ಹಾಗೂ 112 ಪೊಲೀಸ್ ಸ್ಪಂದನಾ ವಾಹನಗಳು ಕಾರ್ಯೋನ್ಮುಖವಾಗುವಂತೆ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ. ಹಿಂದಿನ ದಿನ ರಾಜ್ಯದಲ್ಲಿ ಕನ್ವರ್ ಯಾತ್ರೆಯ ಮಾರ್ಗದಲ್ಲಿ ತೆರೆದ ಮಾಂಸ ಮಾರಾಟವನ್ನು ಸರ್ಕಾರ ನಿಷೇಧಿಸಿತ್ತು. ತೀರ್ಥಯಾತ್ರೆಗೆ ಮುಂಚಿತವಾಗಿ ಇತರ ಅಗತ್ಯ ಸುರಕ್ಷತಾ ಕ್ರಮಗಳನ್ನು ಜಾರಿಗೆ ತಂದಿತು.