ವಿಶ್ವದ ಅತ್ಯಂತ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆ ಗಳಿಸಿದ ಭಾರತದ ಏಕತಾ ಪ್ರತಿಮೆಯನ್ನು ಕೆತ್ತಿದ್ದ ಹಿರಿಯ ಶಿಲ್ಪಿ ರಾಮ್ ಸುತಾರ್ ಅವರು ನಿಧನರಾಗಿದ್ದಾರೆ.
ಗುಜರಾತ್ನಲ್ಲಿರುವ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಸ್ಮರಣಾರ್ಥ ನಿರ್ಮಾಣವಾಗಿದ್ದ ಏಕತಾ ಪ್ರತಿಮೆಯನ್ನು ರಾಮ್ ಸುತಾರ್ ಅವರು ಕೆತ್ತನೆ ಮಾಡಿದ್ದರು. ಬುಧವಾರ ತಡರಾತ್ರಿ ನೋಯ್ಡಾದಲ್ಲಿರುವ ಅವರ ಮನೆಯಲ್ಲಿ ನಿಧನರಾಗಿದ್ದಾರೆ ಎಂದು ಅವರ ಪುತ್ರ ತಿಳಿಸಿದ್ದಾರೆ.
ಅವರಿಗೆ 100 ವರ್ಷ ವಯಸ್ಸಾಗಿತ್ತು. ಅವರು ವಯಸ್ಸಿಗೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಬಹಳ ವಿಷಾದ ಹಾಗೂ ದುಃಖದೊಂದಿಗೆ ನಮ್ಮ ತಂದೆ ಶ್ರೀ ರಾಮ್ ವಂಜಿ ಸುತಾರ್ ಅವರು ಡಿಸೆಂಬರ್ 17ರ ಮಧ್ಯರಾತ್ರಿ ನೋಯ್ಡಾದ ನಮ್ಮ ಮನೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿಸುತ್ತಿದ್ದೇವೆ ಎಂದು ಇವರ ಪುತ್ರ ಅನಿಲ್ ಸುತಾರ್ ಅವರು ಪ್ರಕಟಣೆಯೊಂದರಲ್ಲಿ ತಿಳಿಸಿದ್ದಾರೆ.
ರಾಮ್ ಸುತಾರ್ ಅವರು ಪ್ರಸ್ತುತ ಮಹಾರಾಷ್ಟ್ರದಲ್ಲಿರುವ ಧುಲೆ ಜಿಲ್ಲೆಯ ಗೊಂಡುರ್ ಗ್ರಾಮದ ಸುಸಂಸ್ಕೃತ ಕುಟುಂಬದಲ್ಲಿ 1925ರ ಫೆಬ್ರವರಿ 19ರಂದು ಜನಿಸಿದ್ದರು. ಬಾಲ್ಯದಿಂದಲೂ ಅವರಿಗೆ ಕೆತ್ತನೆಯಲ್ಲಿ ವಿಶೇಷವಾದ ಆಸಕ್ತಿ ಇತ್ತು. ಮುಂಬೈನ ಜೆಜೆ ಸ್ಕೂಲ್ ಆಫ್ ಆರ್ಟ್ & ಅರ್ಕಿಟೆಕ್ಚರ್ನಲ್ಲಿ ಚಿನ್ನದ ಪದಕ ಗಳಿಸಿದ ರಾಮ್ ಸುತಾರ್ ಅವರ ಸಾಧನೆಯ ಉದ್ದವಾದ ಪಟ್ಟಿಯೇ ಇದೆ. ಸಂಸತ್ ಆವರಣದಲ್ಲಿರುವ ಧ್ಯಾನದ ಸ್ಥಿತಿಯಲ್ಲಿರುವ ರಾಷ್ಟ್ರಪಿತ ಮಹಾತ್ಮಗಾಂಧಿಯವರ ಐತಿಹಾಸಿಕ ಪ್ರತಿಮೆ ಹಾಗೂ ಛತ್ರಪತಿ ಶಿವಾಜಿ ಕುದುರೆ ಓಡಿಸುತ್ತಿರುವಂತಹ ಪ್ರತಿಮೆ ಅವರ ಅದ್ಭುತ ಕಲಾ ಕೆತ್ತನೆಗೆ ಸಾಕ್ಷಿಯಾಗಿದೆ.
ವಿಶ್ವದ ಅತ್ಯಂತ ಎತ್ತರದ ʼಭಾರತದ ಏಕತಾ ಪ್ರತಿಮೆʼ ಕೆತ್ತಿದ ಹಿರಿಯ ಶಿಲ್ಪಿ ರಾಮ್ ಸುತಾರ್ ನಿಧನ

